- ಗೃಹರಕ್ಷಕ ದಳ-ಆರ್ಪಿಎಫ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಬದುಕಿದ ರಾಧಾಕೃಷ್ಣ
- ಪ್ರಥಮ ಚಿಕಿತ್ಸೆ ಬಳಿಕ ಮತ್ತೊಂದು ರೈಲಿನ ಮೂಲಕ ಹುಬ್ಬಳಿಗೆ ಕಳಿಸಿದ ಸಿಬ್ಬಂದಿ- ಆಪತ್ಭಾಂದವರಾದ ಗೃಹರಕ್ಷಕ ದಳದ ಎನ್.ಲಕ್ಷ್ಮಣ ನಾಯ್ಕ, ರೈಲ್ವೆ ಪೇದೆ ಅಶೋಕ್ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿದ್ದ ಬೆಂಗಳೂರು ಮೂಲದ ವೃದ್ಧ ಆಯತಪ್ಪಿ ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದುದನ್ನು ತಪ್ಪಿಸಿ, ಗೃಹರಕ್ಷದ ದಳ ಸಿಬ್ಬಂದಿ ಅವರನ್ನು ರಕ್ಷಿಸಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.ಬೆಂಗಳೂರಿನ ಬಿಟಿಎಂ 2ನೇ ಹಂತದ ನಿವಾಸಿ, ಕೆನರಾ ಬ್ಯಾಂಕ್ ನಿವೃತ್ತ ನೌಕರ ಎಸ್.ರಾಧಾಕೃಷ್ಣ (64) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಬೆಂಗಳೂರಿನಿಂದ ರಾಧಾಕೃಷ್ಣ ಹುಬ್ಬಳ್ಳಿಗೆ ತೆರಳಲು ಜನಶತಾಬ್ಧಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಜನಶತಾಬ್ಧಿ ರೈಲು ದಾವಣಗೆರೆ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ 11.20ಕ್ಕೆ ಬಂದಿದೆ. ಆಗ ನಿಲ್ದಾಣದಲ್ಲಿ ಇಳಿದು, ಬಿಸ್ಕೇಟ್ ತರಲೆಂದು ರಾಧಾಕೃಷ್ಣ ಹೋಗಿದ್ದಾಗ, ಕೆಲ ಕ್ಷಣದಲ್ಲೇ ರೈಲು ಹೊರಟಿದೆ.
ರೈಲನ್ನು ಗಮನಿಸಿದ ರಾಧಾಕೃಷ್ಣ ಗಾಬರಿಯಿಂದ ಓಡಿ ಬಂದು, ರೈಲನ್ನು ಹತ್ತಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ರೈಲಿನ ಚಕ್ರಕ್ಕೆ ಸಿಲುಕುವ ಮುನ್ನವೇ ಆಪದ್ಭಾವನಂತೆ ಹೋಂ ಗಾರ್ಡ್ ಸಿಬ್ಬಂದಿ ಎನ್.ಲಕ್ಷ್ಮಣ ನಾಯ್ಕ ಕೈ ಹಿಡಿದು, ಎಳೆದು ರಾಧಾಕೃಷ್ಣ ಅವರನ್ನು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಮೇರೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧೈರ್ಯ ಹೇಳಲಾಯಿತು. ರೈಲ್ವೆ ಪೊಲೀಸ್ ಪೇದೆ ಅಶೋಕ್ ನೆರವಾದರು. ಅನಂತರ ಮತ್ತೊಂದು ರೈಲಿನಲ್ಲಿ ಹುಬ್ಬಳ್ಳಿಗೆ ಕಳಿಸಲಾಯಿತು. ಘಟನೆ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.- - - -15ಕೆಡಿವಿಜಿ16, 17: