ನದಿ ಜೋಡಣೆ: ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ

KannadaprabhaNewsNetwork |  
Published : Feb 03, 2026, 01:15 AM IST
 | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈಗಾಗಲೇ ಬಜೆಟ್‌ನಲ್ಲಿ ಮಂಡಿಸಿರುವ ನದಿ ಜೋಡಣೆ ವಿಚಾರದ ಬಗ್ಗೆ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಮಾಜಿ ಸಂಸದ ಜಿ.ಎಸ್. ಬಸವರಾಜು ರಾಜ್ಯ ಸರ್ಕಾರವನ್ನು ಇಂದಿಲ್ಲಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈಗಾಗಲೇ ಬಜೆಟ್‌ನಲ್ಲಿ ಮಂಡಿಸಿರುವ ನದಿ ಜೋಡಣೆ ವಿಚಾರದ ಬಗ್ಗೆ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಮಾಜಿ ಸಂಸದ ಜಿ.ಎಸ್. ಬಸವರಾಜು ರಾಜ್ಯ ಸರ್ಕಾರವನ್ನು ಇಂದಿಲ್ಲಿ ಒತ್ತಾಯಿಸಿದರು.

ನದಿ ಜೋಡಣೆ ವಿಚಾರವಾಗಿ ರಾಜ್ಯದಲ್ಲಿ ಜಿಲ್ಲೆ, ಜಿಲ್ಲೆಗಳ ಮಧ್ಯೆ ಈಗಾಗಲೇ ಹೋರಾಟಗಳು ಆರಂಭವಾಗಿವೆ. ಎಲ್ಲಾ ವರ್ಗದವರ ಅಭಿಪ್ರಾಯಗಳನ್ನು ಗಣನೆಗೆ ತೆಗದುಕೊಂಡು, ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ, ಪ್ರತಿಯೊಂದು ನದಿ ಪಾತ್ರದ ಇಂತಿಷ್ಟು ನೀರನ್ನು ಇಂತಹ ಪ್ರದೇಶಗಳಿಗೆ ಹಂಚಿಕೆ ಮಾಡುತ್ತೇವೆ ಎಂಬ ಒಂದು ಸಮಗ್ರ ನೀರಿನ ಬಳಕೆಯ ಕಾನೂನು ರೂಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ್ ರವರನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಆಯವ್ಯಯದಲ್ಲಿ ಮಂಡಿಸಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ನದಿ ಜೋಡಣೆಯಡಿಯಲ್ಲಿ ಗೋದಾವರಿ-ಕಾವೇರಿ-ಬೇಡ್ತಿ-ವರದಾ (ಹೀರೇವಡ್ಡಟ್ಟಿ) ಯೋಜನೆಯನ್ನು ಜಾರಿಗೊಳಿಸಲು ನಮ್ಮ ರಾಜ್ಯ ಸರ್ಕಾರವೂ ಮುಂದಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದರು.

ಕಾಳಿ ನದಿಯಿಂದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ, ಕುಮಾರಧಾರ ನದಿ ನೀರನ್ನು ಎತ್ತಿನೊಳೆ ಯೋಜನೆಗೆ, ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಹೀಗೆ ರಾಜ್ಯಾದ್ಯಂತ ಅನೇಕ ಯೋಜನೆಗಳ ಅಧ್ಯಯನ ನಡೆಯುತ್ತಿದೆ. ತುಮಕೂರಿನ ಜಾಲಗುಣಿ ಸೇರಿದಂತೆ ಸುಮಾರು 10 ಕಡೆ ಹೊಸದಾಗಿ ''''''''ಬಫರ್ ಡ್ಯಾಂ'''''''' ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಬೇಕಿದೆ ಎಂದು ಅವರು ತಿಳಿಸಿದರು.

ಹೇಮಾವತಿ ಲಿಂಕ್ ಕೆನಾಲ್‌ಗೆ ನೇತ್ರಾವತಿ-ಹೇಮಾವತಿ ನದಿ ಜೋಡಣೆಯ (ಕುಮಾರಧಾರ) ನೀರನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ. ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ ಪ್ರತಿಯೊಂದು ಪ್ರದೇಶಕ್ಕೂ ನದಿ ನೀರಿನ ಹಂಚಿಕೆ ಮಾಡಬೇಕಿದೆ. ಇದಕ್ಕೂ ಸಹ ಅಧ್ಯಯನ ನಡೆಯುತ್ತಿದೆ. ಪ್ರತಿಯೊಂದು ಯೋಜನೆಗಳ ಕಡತದ ಅನುಸರಣೆಯನ್ನು ನಿರಂತರವಾಗಿ ಕುಂದರನಹಳ್ಳಿ ರಮೇಶ್ ಮಾಡುತ್ತಾ ಬಂದಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ನದಿ ಜೋಡಣೆ (ಎನ್.ಪಿ.ಪಿ) ಯೋಜನೆಯಡಿಯಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಶ್ರಮಿಸಬೇಕಿದೆ. ಹಲವಾರು ವರ್ಷಗಳ ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆಯಲಿದೆ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ ಈ ಎಲ್ಲಾ ಯೋಜನೆಗಳಿಗೆ ಪೂರಕವಾಗಿದೆ. ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯನವರ ಅಧ್ಯಯನಕ್ಕೆ ಮುಕ್ತಿ ಸಿಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.

ಬಾಕ್ಸ್‌...

ಕೈಗಾರಿಕೆಗಳಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಪೂರಕ

ಗೋದಾವರಿ-ಕಾವೇರಿ ನದಿ ಜೋಡಣೆಯಲ್ಲಿ, ತೆಲಂಗಾಣ-43.64 ಟಿ.ಎಂ.ಸಿ, ಆಂಧ್ರ ಪ್ರದೇಶ- 45.27, ಟಿ.ಎಂ.ಸಿ, ತಮಿಳುನಾಡು-40.82 ಟಿ.ಎಂ.ಸಿ, ಕರ್ನಾಟಕ -15.89 ಟಿ.ಎಂ.ಸಿ ಮತ್ತು ಪುದುಚೇರಿ- 2.30 ಟಿ.ಎಂ.ಸಿ ಹಾಗೂ ಕರ್ನಾಟಕ ರಾಜ್ಯಕ್ಕೆ ಬೇಡ್ತಿ-ವರದಾ (ಹೀರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯಲ್ಲಿ 18.50 ಟಿ.ಎಂ.ಸಿ ಅಡಿ ನೀರು ಸೇರಿದಂತೆ ಸುಮಾರು 166.42 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸುತ್ತಿದೆ. ಈ ಯೋಜನೆಯಿಂದ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಅದೇ ರೀತಿ ಅಘಿನಾಶಿನಿ- ವೇದಾವತಿ (ವಾಣಿವಿಲಾಸ) ನದಿ ಜೋಡಣೆಯಿಂದ ಸುಮಾರು 35.10 ಟಿ.ಎಂ.ಸಿ ಅಡಿ ನೀರಿನ ಯೋಜನೆಯ ಅಧ್ಯಯನವೂ ನಡೆಯುತ್ತಿದೆ. ಇದರಿಂದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನೂಕೂಲವಾಗಲಿದೆ. ಈ ಎರಡು ನದಿ ಜೋಡಣೆಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರವೂ ಸೇರಿದಂತೆ ಗೋದಾವರಿ, ಕೃಷ್ಣಾ, ಪಾಲಾರ್, ಪೆನ್ನಾರ್, ಕಾವೇರಿ ನದಿ ಪಾತ್ರಗಳಿಗೂ ಅನೂಕೂಲವಾಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ