ನ್ಯಾಯದಾನದಲ್ಲಿ ವಕೀಲರ ಪಾತ್ರ ಮಹತ್ತರ: ನ್ಯಾ.ಜೀತು

KannadaprabhaNewsNetwork | Published : Jun 5, 2025 11:59 PM
ಶೃಂಗೇರಿ, ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಕಕ್ಷಿದಾರರ ಹಿತ ಕಾಪಾಡುವುದರ ಜೊತೆಗೆ ಸಂವಿಧಾನದ ಆಶಯ ಹಾಗೂ ಹಕ್ಕುಗಳಿಗೆ ಧಕ್ಕೆ ಬಾರದಂತೆ ನ್ಯಾಯಾಂಗ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರು ನ್ಯಾಯದಾನ ವಿಲೇವಾರಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನೂತನ ನ್ಯಾಯಾಧೀಶ ಜೀತು ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜಿಲ್ಲಿದ್ದ ಅಭಿನಂದನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಶೃಂಗೇರಿ

ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಕಕ್ಷಿದಾರರ ಹಿತ ಕಾಪಾಡುವುದರ ಜೊತೆಗೆ ಸಂವಿಧಾನದ ಆಶಯ ಹಾಗೂ ಹಕ್ಕುಗಳಿಗೆ ಧಕ್ಕೆ ಬಾರದಂತೆ ನ್ಯಾಯಾಂಗ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರು ನ್ಯಾಯದಾನ ವಿಲೇವಾರಿ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನೂತನ ನ್ಯಾಯಾಧೀಶ ಜೀತು ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜಿಸಿದ್ದ ಸ್ವಾಗತ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವಿಲೇವಾರಿಯಲ್ಲಿ ವಕೀಲರು ಸಹಕರಿ ಸಬೇಕು. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರತಿಯೊಬ್ಬರಲ್ಲಿ ಬದ್ಧತೆ ಮುಖ್ಯ. ಪ್ರಕರಣಗಳ ಶೀಘ್ರ ವಿಚಾರಣೆ ನಡೆಸಿ ಮುಗಿಸಿದರೆ ಕಕ್ಷಿದಾರರಿಗೆ ಬೇಗ ನ್ಯಾಯ ಒದಗಿಸಲು ಸಾದ್ಯವಾಗುತ್ತದೆ. ಜನರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಹೆಚ್ಚು ನಂಬಿಕೆ ಬರುತ್ತದೆ ಎಂದರು.

ಲೋಕ್ ಅದಾಲತ್ ಗಳು, ರಾಜೀ ಸಂದಾನಗಳ ಮೂಲಕ ಇತ್ಯರ್ಥ ಪಡಿಸಬಹುದಾದ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಿದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಸಮಾಜ ಚಿಂತನೆ, ಜನಸಾಮಾನ್ಯರಿಗೆ ನಿಜವಾದ ನ್ಯಾಯ ದೊರಕಿಸಿಕೊಡುವ ಮೂಲಕ ಉತ್ತಮ ಜನಸೇವಕರಾಗುವ ಜೊತೆಗೆ ವೃತ್ತಿ ಘನತೆ ಕಾಪಾಡಿ ಕೊಳ್ಳಬೇಕು. ಸಂವಿಧಾನ ರಕ್ಷಕರಂತೆ ಇರುವ ವಕೀಲರಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಉತ್ಸುಕತನ ಇದ್ದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇನ್ನಷ್ಟು ಪರಿಣಾಮಕಾರಿ ಬದಲಾವಣೆ ಕಾಣಬಹುದಾಗಿದೆ ಎಂದರು.

ಪ್ರಕೃತಿ ಸಹಜ ನಿಯಮ ಯಾವಾಗಲು ಬದಲಾಗುವುದಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯಾರು ಹೋಗಬಾರದು. ಪ್ರಕೃತಿಯ ಜೊತೆ ಜೊತೆಗೆ ಹೋಗಬೇಕು. ಮಳೆ ಹೇಗೆ ಬರಬೇಕು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಮಳೆ ಬಂದಾಗ ಬರುತ್ತದೆ. ಪ್ರಕೃತಿ ಮುನಿದರೆ ಅದರ ಪರಿಣಾಮ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ, ಜವಾಬ್ದಾರಿ ಎಂದರು.

ವಕೀಲರ ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ವಕೀಲೆ ಹರಿಣಾಕ್ಷಿ, ವಕೀಲರು,ನ್ಯಾಯಾಂಗ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ವಕೀಲ ಜಿ.ಎಂ.ಸತೀಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

5 ಶ್ರೀ ಚಿತ್ರ 1-

ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ಜೀತು ಮಾತನಾಡಿದರು. ಮಹೇಶ್, ಹರಿಣಾಕ್ಷಿ ಮತ್ತಿತರರು ಇದ್ದರು.