ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದ್ದು-ಅನಿತಾ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಉತ್ತಮ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದ್ದು, ಹಿರಿಯ ವಕೀಲರ ಅನುಭವ ಪಡೆದು ಕಿರಿಯ ವಕೀಲರು ವೃತ್ತಿಯಲ್ಲಿ ಯಶಸ್ಸು ಕಾಣಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅನಿತಾ ಓ.ಎ. ಹೇಳಿದರು

ಹಿರೇಕೆರೂರು: ಉತ್ತಮ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದ್ದು, ಹಿರಿಯ ವಕೀಲರ ಅನುಭವ ಪಡೆದು ಕಿರಿಯ ವಕೀಲರು ವೃತ್ತಿಯಲ್ಲಿ ಯಶಸ್ಸು ಕಾಣಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅನಿತಾ ಓ.ಎ. ಹೇಳಿದರು.ಪಟ್ಟಣದ ವಕೀಲರ ಭವನದಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ, ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ವಕೀಲರು ನಿತ್ಯ ಅಧ್ಯಯನಶೀಲರಾಗಿ ಪರಿಶ್ರಮ, ಇಚ್ಛಾಶಕ್ತಿ ಹಾಗೂ ಹಿರಿಯರ ಮಾರ್ಗದರ್ಶನ ಪಡೆದು ವೃತ್ತಿಯಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಬೇಕು ಎಂದರು.ಮಾಜಿ ಶಾಸಕ, ಬಿ.ಎಚ್. ಬನ್ನಿಕೋಡ ಮಾತನಾಡಿ, ವಕೀಲರ ಸೇವೆ ಸಮಾಜಕ್ಕೆ ಅನನ್ಯ, ಗಣನೀಯವಾಗಿದೆ. ಕಿರಿಯ ವಕೀಲರು ಹಿರಿಯರ ಮಾರ್ಗದರ್ಶನದಲ್ಲಿ ಅವರ ವೃತ್ತಿಪರತೆ, ಕ್ರಿಯಾಶೀಲತೆಯನ್ನು ಅಳವಡಿಸಿಕೊಂಡು ನಿರಂತರ ಅಭ್ಯಾಸ ಮಾಡಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಪಿ.ವಿ. ಕೆರೂಡಿ, ಸಮಾಜದಲ್ಲಿ ವಕೀಲ ವೃತ್ತಿ ಗೌರವ ಹಾಗೂ ವಿಶ್ವಾಸದಿಂದ ಇರುವ ವೃತ್ತಿ. ಸತತ ಹಾಗೂ ಹೆಚ್ಚಿನ ಅಧ್ಯಯನ ಮಾಡಿ ವೃತಿಯಲ್ಲಿ ತೊಡಗಿದಾಗ ನಾವು ಮಾಡುವ ವೃತ್ತಿಗೆ ಮಾನ್ಯತೆ ಬರುತ್ತದೆ ಎಂದರು.ಹಿರಿಯ ವಕೀಲರಾದ ಪಿ.ಎಚ್. ಪಾಟೀಲ, ಎಲ್.ಸಿ. ಕೊರಚರ ಹಾಗೂ ಜೆ.ಎನ್. ಹೊಳೆಆನ್ವೇರಿ ಅವರನ್ನು ಸನ್ಮಾನಿಸಲಾಯಿತು.ವಕೀಲರ ದಿನಾಚರಣೆ ನಿಮಿತ್ತ ವಕೀಲರಗಾಗಿ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಣೆ ಮಾಡಲಾಯಿತು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಬಿ. ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ದಿವಾಣಿ ನ್ಯಾಯಾಧೀಶರಾದ ನಾಗರತ್ನಮ್ಮ, ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಸವಿತಾ ಮುಕ್ಕಲ್, ವಕೀಲರ ಸಂಘದ ಉಪಾಧ್ಯಕ್ಷೆ ಎಚ್.ಆರ್.ಬೆಳ್ಳೂರ, ಕಾರ್ಯದರ್ಶಿ ಎಸ್.ಎಚ್. ಪಾಟೀಲ, ವಕೀಲರಾದ ಬಿ.ಎಂ. ಹೊಳೆಯಪ್ಪನವರ, ಎಂ.ಬಿ. ದೂದಿಹಳ್ಳಿ, ಎಚ್.ಎಸ್. ಕೋಣನವರ, ಎಸ್.ಆರ್. ಅಂಗಡಿ, ಯು.ಬಿ. ಜೋಗಿಹಳ್ಳಿ, ಪಿ.ಎಫ್. ಜಾಡರ ಸೇರಿದಂತೆ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ವಕೀಲರಾದ ಎಲ್.ಎಚ್.ಕಳ್ಳಿಮನಿ, ಎಂ.ಬಿ.ಪಾಟೀಲ, ನಟರಾಜ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

Share this article