ಅಪ್ಪಂದಿರ ದಿನಾಚರಣೆ । ಪ್ರತಿ ವಾರ್ಡ್ನಲ್ಲಿ ಉದ್ಯಾನ ನಿರ್ಮಾಣ
ಮಕ್ಕಳಿಗೆ ಮೊಬೈಲ್ ಬಳಕೆ ಹೆಚ್ಚಿಗೆ ಕೊಡದೇ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕೃತಿ ನೀಡುವ ಮೂಲಕ ಮುಂದಿನ ಭವಿಷ್ಯ ಉಜ್ವಲವಾಗಿ ಮಾಡುವ ಜವಾಬ್ಧಾರಿ ಅಪ್ಪ ಅಮ್ಮನ ಮೇಲಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು.
ನಗರದ ಶ್ರೀ ಸಂಗಮೇಶ್ವರ ಬಡಾವಣೆ ಶ್ರೀ ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಮೈ ಲಿಟಲ್ ವರ್ಲ್ಡ್ ಫ್ರೀ ಶಾಲೆಯ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಪ್ಪಂದಿರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.‘ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲಿರುವ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು. ಇನ್ನು ಕಸವನ್ನು ಎಲ್ಲೆಂದರಲ್ಲಿ ಹಾಕದೇ ಕಸ ವಿಲೇವಾರಿ ಮಾಡುವ ವಾಹನಕ್ಕೆ ಹಾಕಬೇಕು. ವೈಯಕ್ತಿಕವಾಗಿ ನಾನು ಕೂಡ ಮಗನ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಟ್ಟರೂ ಕೂಡ ಆಗುತ್ತಿಲ್ಲ. ಅಪ್ಪ ಆದವರು ಮಕ್ಕಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇಲ್ಲವಾದರೇ ದಾರಿ ತಪ್ಪುವ ಬಗ್ಗೆ ಟಿವಿ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಬಹಳಷ್ಟು ಸಮಯ ಮಕ್ಕಳಲ್ಲಿ ಬೆರೆಯುವ ಮೂಲಕ ಹಾಗೂ ಚಿಕ್ಕ ವಯಸ್ಸಿನಿಂದಲೇ ಉತ್ತಮ ಸಂಸ್ಕೃತಿ ಹೇಳಿಕೊಡುವುದು ನಮ್ಮ ಕರ್ತವ್ಯವಾಗಿದೆ’ ಎಂದು ಕಿವಿಮಾತು ಹೇಳಿದರು.
ಮಕ್ಕಳನ್ನು ಸೂಕ್ಷ್ಮವಾಗಿ ನೋಡಿಕೊಂಡು ಬೆಳೆಸಬೇಕು. ಮದರ್ಸ್ ಡೇ, ಫಾದರ್ಸ್ ಡೇಯಂತಹ ಹಲವಾರು ಕಾರ್ಯಕ್ರಮವನ್ನು ಮಾಡುವ ಮೂಲಕ ಈ ಶಾಲೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಎಲ್ಲಾ ಮಕ್ಕಳಿಗೂ ಉತ್ತಮ ಭವಿಷ್ಯ ಕೊಡುವ ಕೆಲಸ ಮಾಡಬೇಕು. ಹಾಸನದಲ್ಲಿರುವ ಪಾರ್ಕ್ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡಲಾಗುತ್ತಿದ್ದು, ಪ್ರತಿ ವಾರ್ಡ್ನಲ್ಲೂ ಪಾರ್ಕ್ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಕಸ ವಿಲೇವಾರಿ ಬಗ್ಗೆ ಹೆಚ್ಚಿನ ಗಮನ ನೀಡಿ ನಗರಸಭೆಯಿಂದ ಬರುವ ವಾಹನಕ್ಕೆ ಕಸವನ್ನು ಹಾಕಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕವಾರದು. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಹಾಸನದ ಸ್ವಚ್ಛತೆ ಬಗ್ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಶಿಕ್ಷಕಿ ಹಾಗೂ ವಾಗ್ಮಿಗಳಾದ ರಾಧ ವೆಂಕಟೇಶ್ ಮಾತನಾಡಿ, ಇವತ್ತು ತಂದೆಯ ದಿನವಾಗಿದ್ದು, ಮಕ್ಕಳ ಬಗ್ಗೆ ತಂದೆಯಾದವರು ನಿಗಾವಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡುತ್ತಿದ್ದಾರೆ. ಆಕಾಶದ ಎತ್ತರಕ್ಕೆ ಮಾಡುವ ಕೆಲಸ ಮಾಡುತ್ತಾರೆ. ಮಕ್ಕಳ ಭವಿಷ್ಯಕ್ಕೆ ತಂದೆ ತಾಯಿ ಇಬ್ಬರ ಪಾತ್ರವು ಅಷ್ಟೆ ಮುಖ್ಯವಾಗಿರುತ್ತದೆ ಎಂದು ಹೇಳಿದರು.ಮೈ ಲಿಟ್ಲು ವರ್ಲ್ಡ್ ಫ್ರೀ ಶಾಲೆಯ ಮುಖ್ಯಸ್ಥೆ, ನಗರಸಭೆ ಸದಸ್ಯೆ ಅಶ್ವಿನಿ ಮಹೇಶ್, ನಗರಸಭೆ ಮಾಜಿ ಸದಸ್ಯ ಮಹೇಶ್, ಇತರರು ಹಾಜರಿದ್ದರು.