ಮಕ್ಕಳನ್ನುಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ: ಶಾಸಕ ರಾಜೇಶ್ ನಾಯ್ಕ್

KannadaprabhaNewsNetwork |  
Published : Sep 06, 2024, 01:07 AM ISTUpdated : Sep 06, 2024, 01:08 AM IST
11 | Kannada Prabha

ಸಾರಾಂಶ

ಸಭಾ ಕಾರ್ಯಕ್ರಮಕ್ಕೆ ಮುನ್ನ ಬಂಟ್ಚಾಳ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಶಿಕ್ಷಕ ವೃಂದದ ಗಮನಸೆಳೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕ ವೃಂದದ ನಿಷ್ಠೆ ಮತ್ತು ಪಾತ್ರ ಮಹತ್ತರವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಉಳಿಪ್ಪಾಡಿಗುತ್ತು ಹೇಳಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನೋತ್ಸವ ನೆನಪಿನಲ್ಲಿ ಬಂಟವಾಳದ ಬಂಟರ ಭವನದಲ್ಲಿ ಜಿಲ್ಲಾಡಳಿತ ಮತ್ತು ದ.ಕ. ಜಿಲ್ಲಾ ಪಂಚಾಯಿತಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಇದರ ಆಶ್ರಯದಲ್ಲಿ ಗುರುವಾರ ನಡೆದ ದ.ಕ. ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ - ೨೦೨೪ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಬಣ್ಣ ಹಚ್ಚಿ ಕಾಯಿಸುವುದು ಸರಿಯಲ್ಲ, ಮಕ್ಕಳ ಪ್ರತಿಭೆಯನ್ನು ನೋಡಲು ಪೋಷಕರು, ಗ್ರಾಮಸ್ಥರು ಆಗಮಿಸಿರುತ್ತಾರೆ. ಜನಪ್ರತಿನಿಧಿಗಳು, ಗಣ್ಯರಿಗಾಗಿ ಸಣ್ಣ ಮಕ್ಕಳನ್ನು ಕಾಯಿಸದೆ ಶಿಕ್ಷಕರು ಕಾರ್ಯಕ್ರಮ ನಡೆಸಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ನಗರ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹಳ್ಳಿಯ ವಿದ್ಯಾರ್ಥಿಗಳು ಹೆಚ್ಚು ಸ್ವತಂತ್ರರು. ಕೋವಿಡ್ ಸಂದರ್ಭದಲ್ಲಿ ನಗರದ ವಿದ್ಯಾರ್ಥಿಗಳು ನಾಲ್ಕು ಕೋಣೆಗಳ ಮಧ್ಯೆ ಬಂಧಿಯಾದರೆ, ಹಳ್ಳಿಯ ಮಕ್ಕಳು ಪರಿಸರದೆಲ್ಲೆಡೆ ಸ್ವತಂತ್ರವಾಗಿ ಸುತ್ತಾಡುವ ಅವಕಾಶವನ್ನು ಹೊಂದಿದ್ದರು. ಮಕ್ಕಳ ಆಸಕ್ತಿಯನ್ನು ಅರಿತುಕೊಂಡು ಅವರಿಗೆ ಸೂಕ್ತ ತರಬೇತಿ ನೀಡಿದಾಗ ಅವರು ಡಿಪ್ರೆಶನ್‌ಗೆ ಹೋಗಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಡಿ.ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ.ಕೆ, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಡಯಟ್ ಪದನಿಮಿತ್ತ ಉಪನಿರ್ದೇಶಕಿ ರಾಜಲಕ್ಷ್ಮೀ ಕೆ. ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ಅಧ್ಯಕ್ಷ ಉಮಾನಾಥ ರೈ ಮೇರಾವ್, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯರಾಮ್, ಮಹಮ್ಮದ್ ರಿಯಾಜ್, ರಾಜೇಂದ್ರ ರೈ, ಜೋಯಲ್ ಲೋಬೋ, ಬಾಲಕೃಷ್ಣ ಶೆಟ್ಟಿ, ಲಿಲ್ಲಿ ಪಾಯಸ್, ಚೆನ್ನಕೇಶವ ಬಂಟ್ವಾಳ, ಗುರುರಾಜ್, ಯತೀಶ್, ಪ್ರೇಮಾ, ನಿಂಗರಾಜು, ದಿಲೀಪ್ ಕುಮಾರ್, ವಿಮಲ್ ನೆಲ್ಯಾಡಿ, ಮಾರ್ಕ್ ಮೆಂಡೊನ್ಸಾ, ಕ್ಷೇತ್ರ ಸಮನ್ವಯ ಅಧಿಕಾರಿ ರಾಘವೇಂದ್ರ ಬಳ್ಳಾಲ್, ಶಿಕ್ಷಕ ದಿನಾಚರಣೆಯ ನೋಡಲ್ ಅಧಿಕಾರಿ ಸುಜಾತ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಇದೇ ವೇಳೆ ದ.ಕ. ಜಿಲ್ಲಾ ಮಟ್ಟದ ಮತ್ತು ಬಂಟ್ವಾಳ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾದ ಶಿಕ್ಷಕ- ಶಿಕ್ಷಕಿಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದೇ ರೀತಿ ಬಂಟ್ವಾಳ ತಾಲೂಕು ಮಟ್ಟದ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ನೌಕರರನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ್ ಸ್ವಾಗತಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂ.ಜಿ. ವಂದಿಸಿದರು. ಸಂತೋಷ್ ಕುಮಾರ್ ತುಂಬೆ, ಮಹೇಶ್ ಕರ್ಕೇರ ಸಿದ್ದಕಟ್ಟೆ, ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮಕ್ಕೆ ಮುನ್ನ ಬಂಟ್ಚಾಳ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಶಿಕ್ಷಕ ವೃಂದದ ಗಮನಸೆಳೆಯಿತು. ಈ ಸಂದರ್ಭದಲ್ಲಿ ಶಿಕ್ಷಕರ ವಿವಿಧ ಬೇಡಿಕೆಯ ಮನವಿಯನ್ನು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಶಾಸಕ ರಾಜೇಶ್ ನಾಯ್ಕ್‌ ಅವರಿಗೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ