ಮೈಸೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ರೂಪಾ ಅಯ್ಯರ್ ಖಂಡನೆ

KannadaprabhaNewsNetwork | Updated : Mar 07 2025, 11:56 AM IST

ಸಾರಾಂಶ

ಅಣ್ಣಾವ್ರು ಡಾ. ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಅವರ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ, ಕನ್ನಡ ಕಲಾವಿದರಿಗೆ ಅವರದ್ದೇ ಆದ ಸ್ಥಾನಮಾನ, ಗೌರವವಿದೆ. ಇದನ್ನು ಅರಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲದು ಎಂದಿದ್ದಾರೆ.

 ಮೈಸೂರು : ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರ ಬಗ್ಗೆ ನಟ್ಟು- ಬೋಲ್ಟು ಪದ ಉಪಯೋಗಿಸಿ ಅವಮಾನಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ ರಾಜ್ಯ ಸಂಚಾಲಕಿ ರೂಪಾ ಅಯ್ಯರ್ ಖಂಡಿಸಿದ್ದಾರೆ.

ಇತ್ತೀಚೆಗೆ ನಡೆದ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ- ನಟಿಯರ ಕುರಿತು ಮಾಡಿದ ಭಾಷಣದ ವೇಳೆ ಕಲಾವಿದರ ನಟ್ಟು- ಬೋಲ್ಟು ಸರಿ ಮಾಡ್ತೇನೆ ಎಂಬ ಅಸಡ್ಡೆ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ್ ಕೂಡಲೇ ಚಿತ್ರರಂಗದವರ ಕ್ಷಮೆ ಕೋರಬೇಕೆಂದು ಅವರು ಆಗ್ರಹಿಸಿದ್ದಾರೆ.

ಚಿತ್ರರಂಗವದವರಿಗೆ ಅವರದ್ದೇ ಅದ ಗೌರವ, ಸ್ಥಾನಮಾನಗಳಿವೆ. ಅದರಲ್ಲೂ ನಟ- ನಟಿಯರು ಸೇರಿದಂತೆ ತಂತ್ರಜ್ಞರು, ಕಲಾವಿದರು ಹೀಗೆ ಸಾವಿರಾರು ಮಂದಿ ಚಿತ್ರರಂಗವನ್ನು ನಂಬಿ ಬದುಕುತ್ತಿದ್ದಾರೆ. ಆದರೆ ಅಂತವರಿಗೆ ಒಂದು ಸರ್ಕಾರಿ ಆಸ್ಪತ್ರೆಗೆ ಹೋದರೇ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಅಲ್ಲದೇ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ, ಹಗಲಿರುಳೆನ್ನದೇ ದುಡಿಯುವ ಚಿತ್ರರಂಗದವರ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿ ಅವರಿಗಿಲ್ಲ ಎಂದು ಅವರು ಟೀಕಿಸಿದ್ದಾರೆ.

ಅಣ್ಣಾವ್ರು ಡಾ. ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಅವರ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ, ಕನ್ನಡ ಕಲಾವಿದರಿಗೆ ಅವರದ್ದೇ ಆದ ಸ್ಥಾನಮಾನ, ಗೌರವವಿದೆ. ಇದನ್ನು ಅರಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲದು ಎಂದಿದ್ದಾರೆ.

ಚಿತ್ರರಂಗದವರನ್ನು ಅವರ ಪಾಡಿಗೆ ಬಿಡಿ, ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿ, ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಅವರು ಕಿಡಿಕಾರಿದ್ದಾರೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿ ಹೊರ ರಾಜ್ಯ, ದೇಶಗಳಿಂದ ಇತರರನ್ನು ಕರೆಸಿ ಹೊಗಳಿ ಸನ್ಮಾನಿಸುವುದನ್ನು ಬಿಟ್ಟು, ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರಿಗೆ ಮನ್ನಣೆ ಕೊಟ್ಟು, ಪ್ರೋತ್ಸಾಹಿಸಿ. ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ. ಅದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಕಲಾವಿದರನ್ನು ಅವಮಾನಿಸಬೇಡಿ ಎಂದು ಅವರು ಒತ್ತಾಯಿಸಿದ್ದಾರೆ.

Share this article