ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ರೋಟರಿ ಕ್ಲಬ್ನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರ ಪತ್ನಿ ದಿವಂಗತ ಚನ್ನಮ್ಮನವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿಲಾಗಿತ್ತು.ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ. ಶಿವರಾಜು ಮಾತನಾಡಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರ ಸರಳತೆ, ಕುಟುಂಬದ ಮೇಲಿನ ಅಪಾರ ಕಾಳಜಿ, ತ್ಯಾಗ ಮತ್ತು ಮಾನವೀಯ ಮೌಲ್ಯಗಳು ಸದಾ ಸಮಾಜಕ್ಕೆ ಸ್ಫೂರ್ತಿಯಾಗಿರಲಿವೆ. ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಚೆನ್ನಮ್ಮ ಅವರು ಮೌನ ಶಕ್ತಿಯಾಗಿ, ನೆರಳಿನಂತೆ ಜೊತೆಯಾಗಿ ನಿಂತು ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ದೇವೇಗೌಡ ಅವರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಮಟ್ಟಕ್ಕೆ ಬೆಳೆಯಲು ಚನ್ನಮ್ಮನವರ ತ್ಯಾಗ, ಸಹಕಾರ ಮತ್ತು ಕುಟುಂಬ ನಿರ್ವಹಣೆ ಬಹು ಮುಖ್ಯ ಕಾರಣವಾಗಿದೆ ಎಂದರು.ರೋಟರಿ ಕ್ಲಬ್ ಝೋನ್ - 8 ರ ಸಹಾಯಕ ಗವರ್ನರ್ ಡಾ. ಎಸ್. ಗಣೇಶ್ ಮಾತನಾಡಿ, ಚನ್ನಮ್ಮ ದೇವೇಗೌಡ ಅವರು ಗ್ರಾಮೀಣ ಮಹಿಳೆಯರಿಗೆ ಶಕ್ತಿಯ ಸಂಕೇತ ಹಾಗೂ ಸ್ಪೂರ್ತಿಯ ಚಿಲುಮೆಯಾಗಿದ್ದರು. ದೇಶದ ಪ್ರಮುಖ ರಾಜಕೀಯ ಕುಟುಂಬದ ಒಡತಿಯಾಗಿದ್ದರೂ ಸರಳತೆ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳನ್ನು ಉಳಿಸಿಕೊಂಡು ಬದುಕಿದ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕುಟುಂಬದ ಜವಾಬ್ದಾರಿಗಳೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕಿದ ಅವರ ಜೀವನ ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಹೇಳಿದರು. ಸಭೆಯಲ್ಲಿ ದಿವಂಗತ ಚನ್ನಮ್ಮ ದೇವೇಗೌಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಸದಸ್ಯರು ಅವರ ಆದರ್ಶಮಯ ಜೀವನ, ಸರಳತೆ, ತ್ಯಾಗ ಹಾಗೂ ಕುಟುಂಬದ ಮೇಲಿನ ಬದ್ಧತೆಯನ್ನು ಸ್ಮರಿಸಿದರುಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ರಾಘವೇಂದ್ರ, ಸದಸ್ಯರಾದ ರೋ. ವಿನೋದ್ ಚೌಡ, ರೋ. ಬಿ.ಎಲ್. ರಾಜೇಗೌಡ, ರೋ. ಯೋಗೇಶ್ ಗೌಡ, ರೋ. ಶಂಭುಗೌಡ, ರೋ. ರೇವಣ್ಣಗೌಡ, ಮೋಹನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.