ಕನ್ನಡಪ್ರಭ ವಾರ್ತೆ ಮಡಿಕೇರಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರ ಬದುಕಿನಲ್ಲಿ ಬದಲಾವಣೆಗೆ ಕಾರಣರಾಗಬೇಕು. ಬದುಕಲೆಂದೇ ಸಂಘಟನೆಗಳಿಗೆ ಸೇರುವ ಬದಲಿಗೆ ಸಂಘಟನೆಗಳಿಗೆ ಸೇರ್ಪಡೆಯಾದ ಬಳಿಕ ಇತರರ ಬದುಕನ್ನು ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ರೋಟರಿ ಜಿಲ್ಲೆ 3181 ನ ಗವರ್ನಲ್ ಎಚ್.ಆರ್.ಕೇಶವ ಕರೆ ನೀಡಿದ್ದಾರೆ.ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೖತ ಭೇಟಿ ನೀಡಿದ ಸಂದರ್ಭ ರೋಟರಿ ಸಭಾಂಗಣದಲ್ಲಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯೇ ಜೀವನವಲ್ಲ. ಆದರೆ ಇತರರ ಜೀವನದ ಮೇಲೆ ಉತ್ತಮ ಪರಿಣಾಮ ಬೀರಲು ಸಂಘಟನೆಗಳ ಮೂಲಕ ಸಾಧ್ಯವಿದೆ. ಇದನ್ನು ರೋಟರಿ ಸಂಸ್ಥೆಯ ಸದಸ್ಯರು ನಿರೂಪಿಸಿದ್ದಾರೆ ಎಂದು ಹೇಳಿದರು.
ರೋಟರಿ ಸದಸ್ಯರು ಅಂತಾರಾಷ್ಟ್ರೀಯ ರೋಟರಿಗೆ ನೀಡುವ ದೇಣಿಗೆಯು ಸಾವಿರಾರು ಸಮಾಜ ಸೇವಾ ಕಾರ್ಯಗಳಿಗೆ ಸಹಕಾರಿಯಾಗುತ್ತಿವೆ. ಲಕ್ಷಾಂತರ ಜನರ ಬದುಕಿಗೆ ಈ ದೇಣಿಗೆ ಕಾರಣವಾಗುತ್ತಿವೆ. ಹೀಗಾಗಿಯೇ 118 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ರೋಟರಿ ಎಂಬ ಸಾಮಾಜಿಕ ಸೇವಾ ಸಂಸ್ಥೆಯು ಮಹತ್ತರವಾದ ಛಾಪು ಬೀರಿದೆ ಎಂದೂ ಕೇಶವ್ ಶ್ಲಾಘಿಸಿದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮುಂದಿನ ಸಾಲಿನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಇದ್ದರು.ಔಷಧಿ ವ್ಯಾಪಾರಿಗಳ ಸಂಘದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮಿಸ್ಟಿ ಹಿಲ್ಸ್ ನಿರ್ದೇಶಕ ಅಂಬೆಕಲ್ ಜೀವನ್ ಕುಶಾಲಪ್ಪ ಮತ್ತು ಕೊಡಗು ರೆಡ್ ಕ್ರಾಸ್ ಸಭಾಧ್ಯಕ್ಷ ಮಿಸ್ಟಿ ಹಿಲ್ಸ್ ನಿರ್ದೇಶಕ ಬಿ.ಕೆ. ರವೀಂದ್ರ ರೈ ಅವರನ್ನು ಈ ಸಂದಭ೯ ಸನ್ಮಾನಿಸಲಾಯಿತು.
ಕಾಲೇಜು ವಿದ್ಯಾರ್ಥಿ ಮಿಲನ್ ಕುಮಾರ್ಗೆ ಮಿಸ್ಟಿ ಹಿಲ್ಸ್ ವತಿಯಿಂತ ಲ್ಯಾಪ್ಟಾಪ್ ಕೊಡುಗೆ ನೀಡಲಾಯಿತು.ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ., ಚೆರುಮಂಡ ಸತೀಶ್ ಸೋಮಣ್ಣ ನಿರ್ವಹಿಸಿದರು.