ಹಣಕ್ಕಾಗಿ ಪರಿಚಿತ ಎಂಜಿನಿಯರ್‌ನಅಪಹರಿಸಿದ್ದ ರೌಡಿ ಸೇರಿ ಇಬ್ಬರ ಸೆರೆ

KannadaprabhaNewsNetwork |  
Published : Nov 21, 2025, 04:00 AM IST
Mutturaj | Kannada Prabha

ಸಾರಾಂಶ

ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಪರಿಚಿತ ಸಿವಿಲ್‌ ಎಂಜಿನಿಯರ್‌ನನ್ನು ಅಪಹರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ರೌಡಿ ಸೇರಿ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದು, ಇಂಗ್ಲೀಷ್‌ ಶಿಕ್ಷಕನಿಗೆ ನೋಟಿಸ್ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಪರಿಚಿತ ಸಿವಿಲ್‌ ಎಂಜಿನಿಯರ್‌ನನ್ನು ಅಪಹರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ರೌಡಿ ಸೇರಿ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದು, ಇಂಗ್ಲೀಷ್‌ ಶಿಕ್ಷಕನಿಗೆ ನೋಟಿಸ್ ನೀಡಿದ್ದಾರೆ.ಆರ್‌.ಆರ್‌.ನಗರ ಠಾಣೆ ರೌಡಿ ಮುತ್ತುರಾಜ್ ಹಾಗೂ ಆತನ ಸಹಚರ ಸಲ್ಮಾನ್ ಬಂಧಿತರು. ಆರೋಪಿಗಳಿಂದ ₹9 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಸಿವಿಲ್‌ ಎಂಜಿನಿಯರ್‌ ಎಸ್‌.ಡಿ ಭರತ್‌ ಕುಮಾರ್‌ ಅವರನ್ನು ಕಾರಿನಲ್ಲಿ ಅಪಹರಿಸಿ ರೌಡಿ ಗ್ಯಾಂಗ್ ಸುಲಿಗೆ ಮಾಡಿತ್ತು. ಈ ಕೃತ್ಯದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರ ನಾಯಕ್‌ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಿವಿಲ್ ಎಂಜಿನಿಯರ್ ಭರತ್, ತಮ್ಮ ಕುಟುಂಬದ ಜತೆ ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ವಂಚಿಸುವ ದಂಧೆಯಲ್ಲಿ ಭರತ್ ಸ್ನೇಹಿತ ಶರತ್ ನಿರತರಾಗಿರುವ ಆರೋಪವಿದೆ. ತನ್ನ ಗೆಳೆಯನ ಮೂಲಕ ಸೀಟು ಕೊಡಿಸುವುದಾಗಿ ನಂಬಿಸಿ ಶಿಕ್ಷಕ ದೇವೇಂದ್ರ ನಾಯಕ್ ಅವರಿಂದ ಭರತ್ ಹಣ ಸಂಗ್ರಹಿಸಿ ಸೀಟು ಕೊಡಿಸದೆ ವಂಚಿಸಿದ್ದ. ಈ ಬಗ್ಗೆ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಭರತ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣದ ತನಿಖೆ ನಡೆದಿರುವುದಾಗಲೇ ದೇವೇಂದ್ರ ನಾಯಕ್‌, ‘ನಿನ್ನ ನಂಬಿ ಶರತ್‌ಗೆ ಕೊಟ್ಟಿರುವ ₹2.5 ಕೋಟಿ ಹಣವನ್ನು ಕೊಡಿಸುವಂತೆ ಭರತ್‌ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಮಾತುಕತೆಗೆ ಸೆ.11ರಂದು ಕರಿಯಣ್ಣ ಪಾಳ್ಯಕ್ಕೆ ಕರೆಸಿಕೊಂಡು ಭರತ್‌ನನ್ನು ರೌಡಿ ಮುತ್ತುರಾಜ್ ಹಾಗೂ ಆತನ ಸಹಚರರ ಮೂಲಕ ನಾಯಕ್ ಅಪಹರಿಸಿದ್ದ. ತರುವಾಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಭರತ್‌ಗೆ ಬೆದರಿಸಿ ಹಣ ಸುಲಿಗೆ ಮಾಡಿ ರೌಡಿ ಗ್ಯಾಂಗ್ ಬಿಟ್ಟು ಕಳುಹಿಸಿತ್ತು.

ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಭರತ್ ನೀಡಿದ ದೂರಿನ್ವಯ ಅಪಹರಣ ಪ್ರಕರಣ ದಾಖಲಾಯಿತು. ಅಷ್ಟರಲ್ಲಿ ದರೋಡೆ ಪ್ರಕರಣದಲ್ಲಿ ಬಂಧಿತರಾಗಿ ಮುತ್ತು ಹಾಗೂ ಸಲ್ಮಾನ್‌ನನ್ನು ಬೇರೆ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು