ಬರದಿಂದ ಜಿಲ್ಲೆಯಲ್ಲಿ ₹1043 ಕೋಟಿ ಬೆಳೆ ಹಾನಿ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಎಲ್ಲ 8 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಬಿತ್ತನೆ ಮಾಡಿದ್ದ ಸುಮಾರು 1,66,280 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ₹ 1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಎಲ್ಲ 8 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಬಿತ್ತನೆ ಮಾಡಿದ್ದ ಸುಮಾರು 1,66,280 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ₹ 1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದ ಗುರಿಯಲ್ಲಿ ಈ ಬಾರಿ 3.27 ಲಕ್ಷ ಹೆಕ್ಟೇರ್‌ (ಶೇ 99.02) ಬಿತ್ತನೆಯಾಗಿತ್ತು. ಜುಲೈ ಹೊರತುಪಡಿಸಿದರೆ ಮುಂಗಾರು ಹಂಗಾಮಿನ ಜೂನ್‌ ಮತ್ತು ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಮಳೆ ಕೊರತೆಯಿಂದ ಬೆಳೆ ಒಣಗಿವೆ. ಇದಕ್ಕೂ ಮೊದಲು ರೈತರು ಬೆಳೆ ಹರಗಿ, ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರು. ಆದರೂ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಸೊರಗಿವೆ. ಇಳುವರಿ ತೀವ್ರ ಕುಂಠಿತವಾಗುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.

ಕಡಿಮೆ ಪರಿಹಾರ:

ಜಿಲ್ಲೆಯಲ್ಲಿ ₹1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಲಾಗಿದ್ದರೂ, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಜಿಲ್ಲೆಗೆ ಸುಮಾರು ₹152.87 ಕೋಟಿ ಪರಿಹಾರ ಮಾತ್ರ ಸಿಗಲಿದೆ. ಬೆಳೆಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸು ಪರಿಹಾರ ಮಾತ್ರ ಸಿಗಲಿದೆ ಎಂಬ ಆಕ್ರೋಶ ರೈತಸಂಘದಿಂದ ವ್ಯಕ್ತವಾಗಿದೆ.

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ನೀಡುವ ಪರಿಹಾರ ಯಾತಕ್ಕೂ ಸಾಲುವುದಿಲ್ಲ, ಬೀಜ, ಗೊಬ್ಬರದ ದರಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಆದರೆ, ಪರಿಹಾರ ಮಾತ್ರ ಹೆಚ್ಚಳವಾಗಿಲ್ಲ. ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಎನ್‌ಡಿಆರ್‌ಎಫ್‌ ನಿಯಮಗಳನ್ನು ಸಡಿಲಿಸಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಕೈಕೊಟ್ಟ ಮಳೆ:

ಜೂನ್‌ ತಿಂಗಳಲ್ಲಿ 119 ಮಿಮೀ ವಾಡಿಕೆ ಮಳೆಗೆ 48 ಮಿಮೀ ಮಳೆ ಬಿದ್ದು, ಶೇ. 60ರಷ್ಟು ಮಳೆ ಕೊರತೆಯಾಯಿತು. ಇದರಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದವು.

ಜುಲೈನಲ್ಲಿ 164 ಮಿಮೀ ವಾಡಿಕೆ ಮಳೆಗೆ ಪ್ರತಿಯಾಗಿ 229 ಮಿಮೀ ಮಳೆ ಸುರಿಯಿತು. ಆಗ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಬೀಜಗಳು ಚಿಗುರಿ, ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಮಳೆ ಕೈಕೊಟ್ಟಿತು. ಆಗಸ್ಟ್‌ನಲ್ಲಿ 127 ಮಿಮೀ ವಾಡಿಕೆ ಮಳೆಗೆ ಕೇವಲ 27 ಮಿಮೀ ಮಳೆಯಾದ ಕಾರಣ ಬೆಳೆಗಳು ಒಣಗಿದವು. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈಸುಟ್ಟು ಕೊಳ್ಳುವಂತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 107 ಮಿಮೀ ವಾಡಿಕೆ ಮಳೆಗೆ ಕೇವಲ 39 ಮಿಮೀ ಮಳೆಯಾಗಿದ್ದು, ಶೇ. 63ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ನಲ್ಲಿ ಕೂಡ ಹನಿ ಮಳೆ ಬಿದ್ದಿಲ್ಲ. ಒಟ್ಟಾರೆ ಈ ವರ್ಷ ಇಲ್ಲಿಯವರೆಗೆ ಶೇ. 28ರಷ್ಟು ಮಳೆ ಕಡಿಮೆಯಾಗಿದೆ.

1.44 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ ಹಾನಿ:

ಬರದಿಂದ ಹಾವೇರಿ ತಾಲೂಕಿನಲ್ಲಿ 37,300 ಹೆಕ್ಟೇರ್‌ ಮೆಕ್ಕೆಜೋಳ, 1917 ಹೆಕ್ಟೇರ್‌ ಶೇಂಗಾ, 2,800 ಹೆಕ್ಟೇರ್‌ ಸೋಯಾ, 1,200 ಹೆಕ್ಟೇರ್‌ ಹತ್ತಿ ಸೇರಿದಂತೆ 43,314 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಸವಣೂರು ತಾಲೂಕಿನಲ್ಲಿ 24,000 ಹೆಕ್ಟೇರ್‌ ಮೆಕ್ಕೆಜೋಳ, ಶೇಂಗಾ 6 ಸಾವಿರ, ಹತ್ತಿ 2,500 ಸೇರಿದಂತೆ 34,823 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಸೇರಿದಂತೆ 23,570 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲಿ 38,902 ಹೆಕ್ಟೇರ್‌ ಮೆಕ್ಕೆಜೋಳ ಸೇರಿದಂತೆ 42,408 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ರಟ್ಟೀಹಳ್ಳಿ ತಾಲೂಕಿನಲ್ಲಿ 21,500 ಹೆಕ್ಟೇರ್‌ ಮೆಕ್ಕೆಜೋಳ ಸೇರಿದಂತೆ 22,165 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಬರೋಬ್ಬರಿ 1.44 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ ಹಾನಿಯಾಗಿದೆ.

ಜಿಲ್ಲೆಯಲ್ಲಿ ಬೆಳೆವಿಮೆ ತುಂಬಿದ ರೈತರ ಖಾತೆಗಳಿಗೆ ಶೇ. 25ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ಅಲ್ಲದೇ ಸರ್ಕಾರ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕು. ಒತ್ತಾಯಪೂರ್ವಕ ಸಾಲ ವಸೂಲಾತಿ ನಿಲ್ಲಬೇಕು ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

ಬೆಳೆಹಾನಿ ಹಾಗೂ ಅದರಿಂದ ಉಂಟಾದ ನಷ್ಟದ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರ ಮಧ್ಯಂತರ ಪರಿಹಾರ ಬಿಡುಗಡೆಗೆ ಆದೇಶಿಸಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

Share this article