ರೈತರ ಬದುಕು ಹಸನಾಗಿಸಲು ಜಿಲ್ಲೆಗೆ 2500 ಕೋಟಿ ರು. ಅನುದಾನ ಬಿಡುಗಡೆ: ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : May 08, 2026, 01:45 AM IST
7ಕೆಎಂಎನ್ ಡಿ21 | Kannada Prabha

ಸಾರಾಂಶ

ರಾಮನಗರ, ತುಮಕೂರು ಜಿಲ್ಲೆಗೆ ಸೀಮಿತವಾಗಿದ್ದ ಉತ್ಸವ ಕಾರ್ಯಕ್ರಮಗಳು ಮಂಡ್ಯ ಜಿಲ್ಲೆಗೂ ಕಾಲಿಟ್ಟಿದ್ದು, ಪ್ರಥಮವಾಗಿ ಮದ್ದೂರು ಉತ್ಸವ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿ ಮನರಂಜನೆ ಜೊತೆಗೆ ಹಲವು ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರನ್ನು ಗೌರವಿಸಿದ್ದಾರೆ .

ಕನ್ನಡಪ್ರಭ ವಾರ್ತೆ ಮದ್ದೂರು

ಕೆಆರ್ ಎಸ್ ಜಲಾಶಯದಿಂದ ಕೊನೆ ಭಾಗದ ರೈತರ ಬೇಸಾಯಕ್ಕೆ ಸರಾಗವಾಗಿ ನೀರನ್ನು ಹರಿಸುವ ಮೂಲಕ ರೈತರ ಬದುಕನ್ನು ಹಸನಾಗಿಸುವ ಉದ್ದೇಶದಿಂದ ಜಿಲ್ಲೆಗೆ ₹2500 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದರು.

ಮದ್ದೂರಿನ ಗ್ರಾಮದೇವತೆ ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಹಾಗೂ ಶ್ರೀ ಉಗ್ರ ನರಸಿಂಹ ಸ್ವಾಮಿಯ ರಥೋತ್ಸವದ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಮದ್ದೂರು ಉತ್ಸವದಲ್ಲಿ ಮಾತನಾಡಿದರು.

ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಹೋರಾಟ ಮಾಡುವ ಮೂಲಕ ಮದ್ದೂರಿನ ಈ ಪುಣ್ಯಭೂಮಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹಲವು ಘಟಾನುಘಟಿ ನಾಯಕರುಗಳಿಗೆ ಜನ್ಮ ನೀಡಿರುವ ಗಂಡು ಮೆಟ್ಟಿದ ನಾಡಿದು. ಈ ಕ್ಷೇತ್ರದಲ್ಲಿ ಹಲವರು ಜನ ನಾಯಕರು ತಮ್ಮದೇ ಆದ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದಾರೆ ಎಂದರು.

ಶಾಸಕ ಉದಯ್ ಆಯ್ಕೆಯಾದ ಮೂರೇ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ₹2 ಸಾವಿರ ಕೋಟಿ ಅನುದಾನವನ್ನು ತಂದು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮದ್ದೂರು ಕ್ಷೇತ್ರಕ್ಕೆ ಮೆಟ್ರೋ, ಏರ್ ಪೋರ್ಟ್ ನಂತಹ ಯೋಜನೆಗಳು ಬೇಡ. ನೀರಾವರಿಗೆ ಹೆಚ್ಚಿನ ಅನುದಾನ ನೀಡಿ ಎಂದು ಶಾಸಕ ಉದಯ್ ಬೇಡಿಕೆ ಇಟ್ಟಿದ್ದರು, ಹೀಗಾಗಿ ತಾಲೂಕಿನ ಕೊನೆಭಾಗಕ್ಕೂ ಸರಾಗವಾಗಿ ನೀರು ಹರಿದು ರೈತರ ಬೇಸಾಯಕ್ಕೆ ನೀರನ್ನು ಹರಿಸುವ ಮೂಲಕ ರೈತರ ಬದುಕನ್ನು ಹಸನಾಗಿಸುವ ಉದ್ದೇಶದಿಂದ ಜಿಲ್ಲೆಗೆ ₹2500 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

₹800 ಕೋಟಿಯನ್ನು ಮದ್ದೂರು ಕ್ಷೇತ್ರಕ್ಕೆ ಬಿಡುಗಡೆ ಮಾಡುವ ಮೂಲಕ ಸೂಳೆಕೆರೆ, ಮದ್ದೂರು ಕೆರೆಗಳ ಒತ್ತುವರಿ ತೆರವು ಮಾಡಿ ಅಭಿವೃದ್ಧಿಗೊಳಿಸಿ ನಾಲೆಗಳ ಆಧುನೀಕರಣ ಮಾಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತಿದ್ದಾರೆ. ಇನ್ನು ಮೇಕೆದಾಟು ಯೋಜನೆಗೂ ಕೂಡ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಈ ಯೋಜನೆ ಜಾರಿಗೆ ಬಂದ ಬಳಿಕ ಈ ಭಾಗದ ನೀರಾವರಿ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಶಾಸಕ ಉದಯ್ ಅವರು ಅಭಿವೃದ್ಧಿ ಜೊತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಬೃಹತ್ ರಾಸುಗಳ ಜಾತ್ರೆ ಆಯೋಜಿಸಿ ಲಕ್ಷಾಂತರ ರುಪಾಯಿ ಬಹುಮಾನ ನೀಡುವ ಮೂಲಕ ರೈತರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ‌ ಎಂದರು.

ರಾಮನಗರ, ತುಮಕೂರು ಜಿಲ್ಲೆಗೆ ಸೀಮಿತವಾಗಿದ್ದ ಉತ್ಸವ ಕಾರ್ಯಕ್ರಮಗಳು ಮಂಡ್ಯ ಜಿಲ್ಲೆಗೂ ಕಾಲಿಟ್ಟಿದ್ದು, ಪ್ರಥಮವಾಗಿ ಮದ್ದೂರು ಉತ್ಸವ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿ ಮನರಂಜನೆ ಜೊತೆಗೆ ಹಲವು ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರನ್ನು ಗೌರವಿಸಿದ್ದಾರೆ ಎಂದರು.

ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಜನರ ನಿರೀಕ್ಷೆಗೂ ಮೀರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ್ದ ಯಾವ ಶಾಸಕರೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಹೊಸ ಹೊಸ ಚಿಂತನೆಗಳ ಮೂಲಕ ಕ್ಷೇತ್ರಕ್ಕೆ ಹೊಸ ರೂಪವನ್ನು ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ವಿನುತಾ ಉದಯ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿ.ಚೆಲುವರಾಜು, ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೃಹದಾಕಾರವಾಗಿ ಬೆಳೆದ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ: ಬೆಮ್ಮನೆ ದಯಾನಂದ್
ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಿ