ಪಿಎಲ್‌ಡಿ ಬ್ಯಾಂಕ್‌ಗೆ ₹75.55 ಲಕ್ಷ ನಿವ್ವಳ ಲಾಭ: ತಿಮ್ಮೇಶಪ್ಪ

KannadaprabhaNewsNetwork |  
Published : Sep 21, 2024, 01:57 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ1 ಶುಕ್ರವಾರ ಪಟ್ಟಣದ ಪಿ,ಎಲ್.ಡಿ. ಬ್ಯಾಂಕ್ ನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆಯನ್ನು ಬ್ಯಾಂಕ್ ನ ಅಧ್ಯಕ್ಷ ಕೆ.ತಿಮ್ಮೇಶಪ್ಪ ಉದ್ಘಾಟಿಸಿ ಮಾತನಾಡಿದರು | Kannada Prabha

ಸಾರಾಂಶ

ಹೊನ್ನಾಳಿ ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2023- 2024ನೇ ಪ್ರಸಕ್ತ ವರ್ಷ ₹75.55 ಲಕ್ಷ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕಿಂತ ₹29.54 ಲಕ್ಷ ಹೆಚ್ಚಿಗೆ ಲಾಭ ಕಂಡಿರುವುದು ಸಂತಸದ ಸಂಗತಿ ಎಂದು ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮೇಶಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ 2023- 2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟನೆ - - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2023- 2024ನೇ ಪ್ರಸಕ್ತ ವರ್ಷ ₹75.55 ಲಕ್ಷ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕಿಂತ ₹29.54 ಲಕ್ಷ ಹೆಚ್ಚಿಗೆ ಲಾಭ ಕಂಡಿರುವುದು ಸಂತಸದ ಸಂಗತಿ ಎಂದು ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮೇಶಪ್ಪ ಹೇಳಿದರು.

ಶುಕ್ರವಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023- 2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಶೇ.80ರಷ್ಟು ಸಾಲ ವಸೂಲಾತಿ ಗುರಿ ಹೊಂದಲಾಗಿತ್ತು. ಆದರೆ, ಎಲ್ಲರ ಸಹಕಾರದಿಂದ ವಿಶೇಷವಾಗಿ ಹಾಲಿ ಮತ್ತು ಮಾಜಿ ಶಾಸಕರು, ಬ್ಯಾಂಕಿನ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ರೈತರು, ಮತ್ತು ರೈತ ಸಂಘದ ಪದಾಧಿಕಾರಿಗಳ ಸಹಕಾರದಿಂದ ಶೇ.86.01ರಷ್ಟು ಗುರಿ ಸಾಧಿಸಿದ್ದೇವೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದರು.

ಬ್ಯಾಂಕ್‌ ಉಪಾಧ್ಯಕ್ಷ ಆರ್.ನಾಗಪ್ಪ ಸ್ವಾಗತಿಸಿದರು. ರೈತ ಮುಖಂಡ ಹಿರೇಮಠದ ಬಸವರಾಜಪ್ಪ ರೈತ ಗೀತೆ ಹಾಡಿದರು. ಬ್ಯಾಂಕ್ ನಿರ್ದೇಶಕ ಎ. ನಾಗೇಂದ್ರಪ್ಪ ವಾರ್ಷಿಕ ಮಹಾಸಭೆ ಆಹ್ವಾನ ಪತ್ರಿಕೆ ಓದಿದರು. ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಬ್ಯಾಂಕ್ ವ್ಯವಸ್ಥಾಪಕಿ ವಿಶಾಲಾಕ್ಷಮ್ಮ ಓದಿದರು.

ಸಭೆ ಆರಂಭದಲ್ಲಿ ಕೆಲವರು ಸಭಾ ತಿಳಿವಳಿಕೆ ಪತ್ರಗಳು ತಮಗೆ ಬಂದಿಲ್ಲ ಎಂದು ಅಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕರು, ನಿಯಮಾವಳಿಗಳ ಪ್ರಕಾರ ಎಲ್ಲ ಸದಸ್ಯರಿಗೆ ಮಹಾಸಭೆ ತಿಳಿವಳಿಕೆ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿತ್ತು. ಕೆಲವು ಕಡೆಗಳಲ್ಲಿ ಅಂಚೆ ಇಲಾಖೆ ಪತ್ರ ಬಟವಾಡೆಯಲ್ಲಿನ ನ್ಯೂನತೆಯಿಂದ ಸಕಾಲಕ್ಕೆ ತಲುಪಿಲ್ಲದಿರಬಹುದು. ಮುಂದಿನ ಬಾರಿ ಸಭಾ ತಿಳಿವಳಿಕೆ ಪತ್ರಗಳನ್ನು ಅಂಚೆ ಮೂಲಕ ಕಳಿಸಿ, ಸದಸ್ಯರ ಮೊಬೈಲ್‌ಗಳಿಗೂ ಕರೆ ಮಾಡಿ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯರೊಬ್ಬರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಾಗಿ ವಿಂಗಡಣೆಯಾಗಿವೆ. ನ್ಯಾಮತಿ ತಾಲೂಕಿಗೆ ಪ್ರತ್ಯೇಕವಾಗಿ ಪಿ.ಎಲ್.ಡಿ. ಬ್ಯಾಂಕ್ ಶಾಖೆ ತೆರೆಯಬೇಕು ಎಂದು ಬೇಡಿಕೆ ಇಟ್ಟರು. ಆಗ ಈ ಬಗ್ಗೆ ಸಹಕಾರಿ ಕ್ಷೇತ್ರದ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಯಿತು.

ಸಭೆಯಲ್ಲಿ 2023- 2024ನೇ ಸಾಲಿನ ಆಡಳಿತ ವರದಿಯನ್ನು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ.ಜಿ.ರಮೇಶ್ ಗೌಡ ಸಭೆಯಲ್ಲಿ ಓದಿದ ನಂತರ ಅಂಗೀಕಾರ ಪಡೆಯಲಾಯಿತು. 2023-24ನೇ ಸಾಲಿನ ಲೆಕ್ಕಪರಿಶೋಧನಾ ಆರ್ಥಿಕ ತಃಖ್ತೆಗಳನ್ನು ವ್ಯವಸ್ಥಾಪಕಿ ವಿಶಾಲಾಕ್ಷಮ್ಮ ಓದಿದ ನಂತರ ಅಂಗೀಕರಿಸಲಾಯಿತು. ಅನುಪಾಲನಾ ವರದಿಯನ್ನು ಎಂ.ಜಿ.ಬಸವರಾಜಪ್ಪ, ಲೆಕ್ಕ ಪರಿಶೋಧಕರ ಆಯ್ಕೆ ಬಗ್ಗೆ ಎಲ್.ಕೆ. ಚಂದ್ರಪ್ಪ, ಅಂದಾಜು ಬಜೆಟ್‌ಗಿಂತ ಹೆಚ್ಚುವರಿ ಖರ್ಚಾದ ಬಾಬುಗಳಿಗೆ ಮಂಜೂರಾತಿ ಬಗ್ಗೆ ಎಚ್.ಪಿ. ವಿಜಯಕುಮಾರ್ ಹಾಗೂ ಬ್ಯಾಂಕ್ ಗಳಿಸಿರುವ ನಿವ್ವಳ ಲಾಭಾಂಶ ವಿಂಗಡಣೆ ಕುರಿತು ಕೆ.ವಿ.ನಾಗರಾಜ್ ವಿಷಯ ಮಂಡನೆ ಮಾಡಿ, ಅಂಗೀಕಾರ ಪಡೆಯಲಾಯಿತು.

ತಾಲೂಕಿನಲ್ಲಿ ಅಗಲಿದ ರೈತ ಸದಸ್ಯರು, ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ಒಂದು ನಿಮಿಷ ಮೌನಾಚಾರಣೆ ಮೂಲಕ ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಬ್ಯಾಂಕ್ ಹಾಲಿ ಮತ್ತು ಮಾಜಿ ಅಧ್ಚಕ್ಷರು, ಉಪಾಧ್ಯಕ್ಷರು, ಸದಸ್ಯರು, ರೈತ ಸಂಘ ಪದಾಧಿಕಾರಿಗಳು, ರೈತರು, ಇನ್ನಿತರ ಮುಖಂಡರು ಭಾಗವಹಿಸಿದ್ದರು.

- - - -20ಎಚ್.ಎಲ್.ಐ1:

ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ ಮಹಾ ಸಭೆಯನ್ನು ಅಧ್ಯಕ್ಷ ಕೆ.ತಿಮ್ಮೇಶಪ್ಪ ಉದ್ಘಾಟಿಸಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ