ಕನ್ನಡಪ್ರಭ ವಾರ್ತೆ ಮೂಡುಬಿದಿರೆಶತಮಾನ ಕಾಣುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಹಳ್ಳಿಹಳ್ಳಿಗಳಲ್ಲಿ ಪಸರಿಸಿ ದೇಶ ಮಾತ್ರವಲ್ಲ ವಿದೇಶದಲ್ಲೂ ವಿಸ್ತರಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಆರೆಸ್ಸೆಸ್ ಸಕ್ರಿಯವಾಗಿತ್ತು. ತೀರಾ ಇತ್ತೀಚಿನ ಪೆಹಲ್ಗಾಂವ್ ದುರಂತ, ಗುಜರಾತ್ ವಿಮಾನ ದುರಂತದ ವೇಳೆಯೂ ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿ ಸೇವಾ ನಿರತರಾಗಿದ್ದರು. 1979ರಲ್ಲಿ ಗುಜರಾತ್ನ ಮೋರ್ವಿಯಲ್ಲಿ ಮಚ್ಚು ಅಣೆಕಟ್ಟು ಒಡೆದು ಬೀದಿಪಾಲಾದ 12 ಸಾವಿರ ಮುಸ್ಲಿಂ ಕುಟುಂಬಗಳಿಗೆ ರಂಜಾನ್ನ ಆ ಸಮಯದಲ್ಲೂ ಉಪವಾಸ, ಆಹಾರ ವ್ಯವಸ್ಥೆ ಒದಗಿಸುವಲ್ಲಿ ಆರೆಸ್ಸೆಸ್ ತೋರಿದ ಸೇವಾ ಬದ್ಧತೆ ಗಮನಾರ್ಹ ಎಂದು ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ, ಲೇಖಕ, ಪ್ರಾಧ್ಯಾಪಕ ಡಾ. ರವಿ ಮಂಡ್ಯ ಹೇಳಿದರು.ಅವರು ಸ್ವಾತಂತ್ರ್ಯ ದಿನಾಚರಣೆಯಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಲೇಖಕ, ಪ್ರಕಾಶಕ ನಂದಿಕೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ, ಮಾಜಿ ಪತ್ರಕರ್ತ ಹಾಗೂ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಬರೆದ ‘ಆರ್ಎಸ್ಎಸ್ 100: ಶತ ಪಥ’ ಸಂಚಲನ ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ಮುಖ್ಯ ಅತಿಥಿ ಬೆಂಗಳೂರು ವಿದ್ಯಾಭಾರತಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್. ಮಾತನಾಡಿ, ಆರೆಸ್ಸೆಸ್ ರಾಷ್ಟ್ರವನ್ನೇ ತಾಯಿ ಭಾವನೆಯಿಂದ ಸೇವಾ ನಿರತವಾಗಿದೆ. ಸಂಘವೊಂದು ಮಾವಿನ ಮರವಿದ್ದಂತೆ ಹಾಗಾಗಿ ಫಲವತ್ತಾದ ಇದರ ಹಣ್ಣುಗಳಿಗೆ ಕಲ್ಲು ಹೊಡೆಯುವವರು ಅಧಿಕ. ದೇಸಿ ಸಂಸ್ಕಾರವಂತ ಶಿಕ್ಷಣ ಸಂಘದ ಆದ್ಯತೆ ಅದಕ್ಕೀಗ ಬೆಲೆ ಬರುತ್ತಿದೆ. ಸಂಘವನ್ನು ವಿರೋಧಿಸಿದವರನ್ನೂ ಸಂಘ ಪ್ರೀತಿಸಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕ ಶಿಕಾರಿಪುರ ಈಶ್ವರ ಭಟ್, ಸಜ್ಜನರ ಶಕ್ತಿಯ ನಿಷ್ಕ್ರಿಯತೆ ಅಪಾಯಕಾರಿ ಎಂದು ಹೇಳಿದರು.ರೋಹನ್ ಅತಿಕಾರಿ ಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವೆಂಕಟರಮಣ ಕೆರೆಗದ್ದೆ ವಂದಿಸಿದರು. ಎಚ್.ಎನ್. ನಟರಾಜ್ ಆಶಯ ಗಾನ ಹಾಡಿದರು.