ಜೆಡಿಎಸ್ ಟೀಕಿಸುತ್ತಿದ್ದ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ: ರುದ್ರೇಶ್

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿಚಾರದಲ್ಲಿ ಅತ್ಯಂತ ಕೀಳು ಮಟ್ಟದ ಪದಬಳಕೆ ಮಾಡಿ ಮಾತನಾಡಿದ್ದರುಸ,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಭೂತ ಪೂರ್ವ ವಿಜಯ ಸಾಧಿಸಿದ್ದು, ಆ ಮೂಲಕ ಪಕ್ಷವನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಅವರು ಸಂಸದರಾಗಿ ಜಯಗಳಿಸಿದ ಹಿನ್ನೆಲೆ, ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮನ್ನು ಟೀಕಿಸುತ್ತಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಇತರ ಕಾಂಗ್ರೆಸ್ ಶಾಸಕರು ಈಗ ಉತ್ತರ ನೀಡಬೇಕೆಂದರು.

ಮಂಡ್ಯ ನಗರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂರ್ಯ, ಚಂದ್ರನ ಮೇಲಾಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲವೆಂದು ಭವಿಷ್ಯ ನುಡಿದಿದ್ದರು, ಈಗ ಸೂರ್ಯ ಮತ್ತು ಚಂದ್ರ ಎಲ್ಲಿ ಉದಯಿಸಿದ್ದಾರೆ ಎಂಬುವುದಕ್ಕೆ ಅವರೇ ಸಾಕ್ಷಿಯಾಗಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿಚಾರದಲ್ಲಿ ಅತ್ಯಂತ ಕೀಳು ಮಟ್ಟದ ಪದಬಳಕೆ ಮಾಡಿ ಮಾತನಾಡಿದ್ದರುಸ, ಅದಕ್ಕೆ ಕ್ಷೇತ್ರದ ಮತದಾರ ಪ್ರಭುಗಳು ತಕ್ಕ ಉತ್ತರ ನೀಡಿದ್ದು ಮುಂದಾದರೂ ಆ ಮಹಾನಾಯಕರುಗಳು ಜೆಡಿಎಸ್ ಮತ್ತು ನಮ್ಮ ನಾಯಕರ ವಿಚಾರದಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದರು.

ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮತ್ತು ಎರಡು ಪಕ್ಷದ ನಾಯಕರಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಾಚರಿಸಿದರು. ಪುರಸಭೆ ಸದಸ್ಯೆ ಮಂಜುಳ ಚಿಕ್ಕವೀರು, ಜೆಡಿಎಸ್ ಮುಖಂಡರಾದ ಎಸ್.ವಿ.ಎಸ್. ಸುರೇಶ್, ಯೋಗೇಶ್, ರೇಖಾರವೀಂದ್ರ, ಪಾಪಣ್ಣ, ರವೀಂದ್ರ, ಸುರೇಶ್, ರೂಪಸತೀಶ್, ಲೋಕೇಶ್, ಮಾದೇಶ್, ಚೀರ್ನಣಹಳ್ಳಿಶ್ರೀನಿವಾಸ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

Share this article