ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸ್ವಾವಲಂಬಿ ಬದುಕಿನ ಛಾಪನ್ನು ಮೂಡಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ, ಸ್ವಉದ್ಯೋಗವನ್ನು ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಗಮನ ಹರಿಸಬೇಕು. ಯಾರೊಬ್ಬರ ಮೇಲೂ ಅವಲಂಬಿಗಳಾಗದೆ, ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಪ್ರಮೋದ್ ನವಣಿ ತಿಳಿಸಿದರು.ನಗರದ ರುಡ್ಸೆಟ್ ಸಂಸ್ಥೆಯು ಜಿಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಪ್ರಾಯೋಜಕತ್ವದಲ್ಲಿ ಮಂಗಳವಾರ ಆಯೋಜಿಸಿದ್ದ 30 ದಿನಗಳ ಮಹಿಳೆಯರ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸ್ವಾವಲಂಬಿ ಬದುಕಿನ ಛಾಪನ್ನು ಮೂಡಿಸುತ್ತಿದ್ದಾರೆ. ಅಂತಹ ಕ್ಷೇತ್ರಗಳಲ್ಲಿ ಮುಖ್ಯವಾಗಿ ಟೈಲರಿಂಗ್ ಉದ್ಯಮವೂ ಒಂದು. ಮಹಿಳೆ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಆಕೆಯ ಕೈಯಲ್ಲಿ ಒಂದು ಕಸುಬು ಅಗತ್ಯ. ಅದರಲ್ಲಿ ಆಕೆಯ ಕೈಗೆ ಬಹಳ ಬೇಗ ಎಟಕುವಂತಹದ್ದು ಟೈಲರಿಂಗ್ ಕೆಲಸ ಎಂದರು.ಈ ಟೈಲರಿಂಗ್ ಉದ್ಯೋಗ ಒಂದು ಸಾರ್ವತ್ರಿಕ ಉದ್ಯಮ ಮತ್ತು ಎಲ್ಲರಿಗೂ ಅವಶ್ಯಕವಿರುವ ಉತ್ಪನ್ನವನ್ನು ಒದಗಿಸುವ ಉದ್ಯಮ. ಮನೆಯಲ್ಲಿ ಒಂದು ಚಿಕ್ಕದಾಗಿ ಉದ್ಯಮವನ್ನು ಆರಂಭ ಮಾಡಿದರೂ ಮನೆಯನ್ನು ನಡೆಸುವಷ್ಟು ಆದಾಯ ಗಳಿಸಬಹುದು. ತರಬೇತಿ ಕಲಿಕೆಗಾಗಿ ಮನೆಯಿಂದ ಆಚೆ ಬಂದು ಸ್ವಾವಲಂಬನೆ ಹಾದಿಯ ಒಂದು ಹೆಜ್ಜೆ ದಾಟಿದ್ದೀರಿ, ಇನ್ನುಳಿದ ಹಂತಗಳನ್ನು ನಿಬಾಯಿಸಲು ಕೌಶಲ್ಯದ ನಿಪುಣತೆ ಅಗತ್ಯ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕಿ ಸರಿತಾ ಮಾತನಾಡಿ, ವಸ್ತ್ರ ವಿನ್ಯಾಸದ ಉದ್ಯಮ ಇಂದು ವಿನೂತನವಾಗಿ ಹೊಸತನಕ್ಕೆ ತೆರೆದುಕೊಂಡಿದೆ. ಪ್ರಸ್ತುತೆಗೆ ತಕ್ಕಂತೆ ಕೌಶಲ್ಯಗಳನ್ನು ಉನ್ನತೀಕರಿಸಿಕೊಂಡು ಆದಾಯ ಮತ್ತು ಬೇಡಿಕೆಯನ್ನು ಉತ್ತಮಗೊಳಿಸಿಕೊಳ್ಳಿ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ 29 ಜನ ಶಿಬಿರಾರ್ಥಿಗಳು ಹಾಜರಿದ್ದರು. ಸಂಸ್ಥೆಯ ಉಪನ್ಯಾಸಕರಾದ ಪಾಲ್ ರಾಜ್, ಲತಾಮಣಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.