ಚಿತ್ರದುರ್ಗ: ತಾಲೂಕಿನ ಗೊಡಬನಹಾಳ್ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಅಣಬೆ ಬೇಸಾಯ ಹಾಗೂ ಮಾರುಕಟ್ಟೆ ಮಾರ್ಗೋಪಾಯಗಳ ಕುರಿತು ತರಬೇತಿ ನಡೆಯಿತು.
ಹಲವು ವರ್ಷಗಳಿಂದ ಅಣಬೆ ಬೇಸಾಯ ಮಾಡುತ್ತಿರುವ ರೈತರು ಹಾಗೂ ರೈತ ಮಹಿಳೆಯರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಸದುಪಯೋಗ ಪಡೆದುಕೊಂಡರು. ಅಣಬೆ ಬೆಳೆಗಾರರಿಗೆ ಹಾಗೂ ಅಣಬೆ ಉದ್ಯಮಿದಾರರೊಂದಿಗೆ ಬೈ ಬ್ಯಾಕ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಅಣಬೆ ಖರೀದಿಸುವುದಾಗಿ ತಿಳಿಸಿದರು. ಅಣಬೆ ಉದ್ದಿಮೆದಾರ ಪ್ರಜ್ವಲ್ ಕೃಷ್ಣ ಅವರು ಮದರ್ ಎಂಟರ್ಪ್ರೈಸಸ್ ಸಂಸ್ಥೆವತಿಯಿಂದ ರಾಜ್ಯಾದ್ಯಂತ ಅಣಬೆ ಹಾಗೂ ಅಣಬೆ ಪುಡಿಯನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಖರೀದಿಸಲಾಗುವುದು ಎಂದು ತಿಳಿಸಿದರು.
ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಕೃಷಿ ತಾಂತ್ರಿಕತೆ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಡಿ ಬಾರ್ಕೆರ ತರಬೇತಿ ನೀಡಿದರು. ಅಣಬೆ ಬೆಳೆಗಾರರಾದ ರೇಣುಕಾ ತುಮಕೂರು ಅವರು ಅಣಬೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದರು.ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶೃತಿ ಪಿ.ಗೋಂಡಿ, ಗೊಡಬನಹಾಳ್ ಗ್ರಾಮದ ಮುಖಂಡರಾದ ಅಶೋಕ್, ಮಲ್ಲೇಶ್, ಪ್ರಸನ್ನಕುಮಾರ್ ಇದ್ದರು.