ರಾಮಮೂರ್ತಿ ನವಲಿ ಗಂಗಾವತಿ
ಈ ಹಿಂದೆ ಗ್ರಾಮೀಣ ಪೊಲೀಸ್ ಠಾಣೆ ನಗರದ ಪೊಲೀಸ್ ಸಮುಚ್ಚಯದಲ್ಲಿತ್ತು. ತೀರ ಹಳೆಯದಾಗಿದ್ದರಿಂದ ಅನುದಾನ ಬರುತ್ತದೆ ಎನ್ನುವ ಲೆಕ್ಕಾಚಾರದಿಂದ ಇದ್ದ ಕಟ್ಟಡ ನೆಲಸಮ ಮಾಡಲಾಗಿದೆ.
ನಗರದ ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರ ಅತಿಥಿ ಗೃಹದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಇದ್ದು, ಇದಕ್ಕಾಗಿ ಪ್ರತಿ ತಿಂಗಳು ₹22 ಸಾವಿರ ಪಾವತಿಸುತ್ತಿದೆ. ಸಮಿತಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಇಲ್ಲದ ಕಾರಣ 55 ತಿಂಗಳು ಕರಾರು ಇದೆ.ಇದ್ದ ಕಟ್ಟಡ ನೆಲಸಮ: ಗ್ರಾಮೀಣ ಪೊಲೀಸ್ ಠಾಣೆಯ ಹಳೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗೆ ಸಿದ್ದಪಡಿಸಲಾಗಿತ್ತು. 40 ವರ್ಷಗಳ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಕ್ಕೆ ಕಾಯುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹೊಸ ಕಟ್ಟಡ ಮರೀಚಿಕೆಯಾಗಿ ಉಳಿದಿದೆ.
ದೂರುದಾರರ ಪರದಾಟ: ಗಂಗಾವತಿ ನಗರ ಪೊಲೀಸ್ ಸಮುಚ್ಚಯದಲ್ಲಿ ಡಿವೈಎಸ್ಪಿ ಕಚೇರಿ, ನಗರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆ ಜತೆಗೆ ಗ್ರಾಮೀಣ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. ಈಗ ಜನರು ಸುಮಾರು ಮೂರು ಕಿಮೀ ದೂರ ಹೋಗಿ ದೂರು ದಾಖಲಿಸಬೇಕಾದ ಸ್ಥಿತಿ ಬಂದಿದೆ. ಇದರಿಂದ ಸಿಬ್ಬಂದಿಗಳಿಗೂ ತಮ್ಮ ವಸತಿ ಗೃಹಗಳಿಗೆ ಹೋಗಲು ವಿಳಂಬವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದಷ್ಟು ಬೇಗ ಸರ್ಕಾರ( ಕರ್ನಾಟಕ ಸ್ಟೇಟ್ ಹೌಸಿಂಗ್ ಬೋರ್ಡ್) ಅನುದಾನ ನೀಡಿದರೆ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಹೊಸ ಕಟ್ಟಡದ ಪ್ರಸ್ತಾನೆಯ ಬಗ್ಗೆ ಮಾಹಿತಿ ಇಲ್ಲ. ಕಳೆದ 4 ತಿಂಗಳಿಂದ ಅಧಿಕಾರ ವಹಿಸಿಕೊಂಡಿದ್ದೇನೆ. ಕಟ್ಟಡದ ಬಗ್ಗೆ ಮಾಹಿತಿ ಇಲ್ಲ ಎಂದು ರಾಯಚೂರು ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡ್ ಎಇಇ ಲಿಂಗರಾಜ್ ತಿಳಿಸಿದ್ದಾರೆ.