ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಎಸ್.ಮರಿಸ್ವಾಮಿಗೌಡ ಆಯ್ಕೆ

KannadaprabhaNewsNetwork |  
Published : Dec 05, 2025, 12:30 AM IST
4ಕೆಎಂಎನ್ ಡಿ12 | Kannada Prabha

ಸಾರಾಂಶ

ಕೃಷಿ ಪತ್ತಿನ ಸಂಘದಲ್ಲಿ ಷೇರು ಹೆಚ್ಚಿಸುವ ಜತೆಗೆ ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ರಸಗೊಬ್ಬರಗಳ ಪೂರೈಕೆ, ಸರ್ಕಾರ ವತಿಯಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುತ್ತೇನೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಮರಿಸ್ವಾಮಿಗೌಡ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷ ಸಿ.ಚನ್ನೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಎಸ್.ಮರಿಸ್ವಾಮಿಗೌಡ ರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಸಂಘದ ಮುಖ್ಯ ನಿರ್ವಹಣಾಧಿಕಾರಿ ಮಧುಸೂದನ್ ಘೋಷಣೆ ಮಾಡಿದರು.

ನಂತರ ನೂತನ ಅಧ್ಯಕ್ಷ ಎಸ್.ಮರಿಸ್ವಾಮಿಗೌಡ ಮಾತನಾಡಿ, ಪಕ್ಷಾತೀತವಾಗಿ ಬೆಂಬಲ ನೀಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಸಂಘದ ನಿರ್ದೇಶರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ತಿಳಿಸಿದರು.

ಸಂಘದಲ್ಲಿ ಷೇರು ಹೆಚ್ಚಿಸುವ ಜತೆಗೆ ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ರಸಗೊಬ್ಬರಗಳ ಪೂರೈಕೆ, ಸರ್ಕಾರ ವತಿಯಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುತ್ತೇನೆ ಎಂದರು.

ಇದೇ ವೇಳೆ ಗ್ರಾಮಸ್ಥರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಕರಡಕೆರೆ ಹನುಮಂತೇಗೌಡ, ಸದಸ್ಯ ಸುರೇಂದ್ರ ಸಂಘದ ಉಪಾಧ್ಯಕ್ಷೆ ಟಿ.ಪದ್ಮಮ್ಮ, ಮುಖಂಡರಾದ ನಾಗೇಶ್, ಜೆಸಿಬಿ ಶಿವಲಿಂಗ, ಪುಟ್ಟಸ್ವಾಮಿ, ಶೆಟ್ಟಹಳ್ಳಿ ರಘು, ಸಿದ್ದರಾಜು, ಎಸ್.ಬಿ.ಮನು, ಗಿರೀಶ್, ಕರಡಕೆರೆ ಮನು, ನಿರ್ದೇಶಕರಾದ ಸಿ.ಚನ್ನೇಗೌಡ, ಎಸ್.ಶೇಖರ್, ಬೋಮ್ಮೇಗೌಡ, ಎ.ಎಚ್.ಶಿವಲಿಂಗೇಗೌಡ, ಎಸ್.ಬಿ. ನಂಜುಡೇಗೌಡ, ಬಿ.ಅಂದಾನಿಗೌಡ, ಎಸ್.ಎಚ್. ತಿಮ್ಮರಾಜು, ಕೆ.ಎಚ್.ಇಂದಿರಾ, ಕೆಂಪಮ್ಮ, ಟಿ.ಎಸ್.ಚರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿ.ಪಿ.ಪ್ರಕಾಶ್‌ ಮುಡಾ ನೂತನ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿ.ಪಿ.ಪ್ರಕಾಶ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ನಾಲ್ವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3ರ ಉಪಕಲಂ 3(ಎ) ಮತ್ತು 3(ಎಂ) ರನ್ವಯ ಹಾಗೂ ಕಲಂ 3(4)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರದ ಮುಂದಿನ ಆದೇಶದವರೆಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಬಿ.ಪಿ.ಪ್ರಕಾಶ್‌, ನಾಮನಿರ್ದೇಶಕ ಸ್ಥಾನಗಳಿಗೆ ಇದ್ರೀಸ್‌ಖಾನ್‌, ಕೆ.ಜೆ.ಕಾರ್ತಿಕ್‌, ಎನ್‌.ಎಸ್‌.ಮಹೇಶ್‌, ಕಮಲಮ್ಮ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಆದೇಶ ಹೊರಡಿಸಿದ್ದಾರೆ.

ಬಿ.ಪಿ.ಪ್ರಕಾಶ್‌ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದು, ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್‌ ಆಪ್ತ ವಲಯದವರಾಗಿದ್ದಾರೆ. ಈ ಹಿಂದೆ ನಗರಸಭಾ ಸದಸ್ಯರಾಗಿದ್ದ ನಯೀಂ ಮುಡಾ ಅಧ್ಯಕ್ಷರಾಗಿದ್ದರು. ಇದೀಗ ಅವರ ಸ್ಥಾನಕ್ಕೆ ಬಿ.ಪಿ.ಪ್ರಕಾಶ್‌ ಅವರನ್ನು ಸರ್ಕಾರ ನೇಮಕ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿತ ಬಿಟ್ಟು ನವ ಜೀವನಕ್ಕೆ ಕಾಲಿಟ್ಟ ಸಮೂಹ; ಹೆಗ್ಗಡೆಯವರ ಸಂಕಲ್ಪ ಸಾರ್ಥಕ
ಮಕ್ಕಳಲ್ಲಿ ಪತ್ರಿಕೆಗಳು, ಸಾಹಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಟಿ.ಸತೀಶ್ ಜವರೇಗೌಡ