ಸಾಹಿತ್ಯ ಪರಂಪರೆ ನಮ್ಮ ಹಿಂದೆ ನೆಲೆ ನಿಂತಾಗ ಮತ್ತು ಫಲವತ್ತಾದ ಪರಿಸರದ ಸ್ಪರ್ಶದಿಂದ ಓರ್ವ ಬರಹಗಾರ ಹುಟ್ಟುತ್ತಾನೆ. ವಿಷ್ಣು ನಾಯ್ಕ ಹೀಗೆಯೇ ರೂಪುಗೊಂಡವರು. ಅವರು ತಮ್ಮ ಮನೆ ಅಂಗಳವನ್ನೇ ಸಾಹಿತ್ಯದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಹೊಸ ಹೊಸ ಸಾಧ್ಯತೆಯತ್ತ ಹೊರಳಿದರು.
ಕುಮಟಾ:
ಸಾಹಿತ್ಯ ಪರಂಪರೆ ನಮ್ಮ ಹಿಂದೆ ನೆಲೆ ನಿಂತಾಗ ಮತ್ತು ಫಲವತ್ತಾದ ಪರಿಸರದ ಸ್ಪರ್ಶದಿಂದ ಓರ್ವ ಬರಹಗಾರ ಹುಟ್ಟುತ್ತಾನೆ. ವಿಷ್ಣು ನಾಯ್ಕ ಹೀಗೆಯೇ ರೂಪುಗೊಂಡವರು. ಅವರು ತಮ್ಮ ಮನೆ ಅಂಗಳವನ್ನೇ ಸಾಹಿತ್ಯದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಹೊಸ ಹೊಸ ಸಾಧ್ಯತೆಯತ್ತ ಹೊರಳಿದರು ಎಂದು ಹಿರಿಯ ಕಥೆಗಾರ ಶ್ರೀಧರ ಬಳಗಾರ ಅಭಿಪ್ರಾಯಿಸಿದರು.ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತಿ ದಿ. ವಿಷ್ಣು ನಾಯ್ಕ ಅವರ ಗೌರವಾರ್ಥ ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಸಂಘಟನೆ ಹಮ್ಮಿಕೊಂಡ ನೆನಪಿನೊಂದಿಗೆ ವಿಷ್ಣು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೀರಿ ಹೋದವರನ್ನು ತಿರುಗಿ ನೆನಪಿಸದೇ ಇದ್ದರೆ ಅವರನ್ನು ಮತ್ತೊಮ್ಮೆ ಸಾಯಿಸಿದ ಹಾಗೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.ಉದಯೋನ್ಮುಖ ಬರಹಗಾರರಗಿಗೆ ಕೆಲವು ಕುತೂಹಲಕರ ಪ್ರಶ್ನೆಗಳು, ಆತಂಕಗಳಿರುತ್ತವೆ. ಇಂತಹ ಪ್ರಶ್ನೆಗಳಿಗೆ ಉತ್ತರ ರೂಪವಾಗಿ, ಮಾದರಿಯಾಗಿ ವಿಷ್ಣು ನಾಯ್ಕ ಮಾದರಿಯಾಗಿ, ಸಾಕ್ಷಿಯಾಗಿ ದಕ್ಕುತ್ತಾರೆ. ವಿಷ್ಣು ಈ ನೆಲದ ನಿಜಕ್ಕೆ ನುಡಿರೂಪ ಕೊಟ್ಟಿದ್ದಾರೆ. ಈ ನೆಲದ ಸತ್ವಕ್ಕೆ ಹೊರಗಿನ ತಾತ್ವಿಕ ಸ್ಪರ್ಶ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.ಪ್ರಾಚಾರ್ಯ ಫಾಲ್ಗುಣ ಗೌಡ ಮಾತನಾಡಿ, ಆರು ದಶಕಗಳ ಕಾಲ ಸಾಹಿತ್ಯ, ಸಂಘಟನೆ, ಪ್ರಕಾಶನ, ರೈತ ಚಳವಳಿ ಇವೆಲ್ಲ ವಿಷ್ಣು ನಾಯ್ಕ ಅವರ ಬದುಕಿನ ಪದರುಗಳಾಗಿದ್ದವು. ಅವರ ಸಾಧನೆಯ ಹಿಂದೆ ಮಹಾ ಆದರ್ಶಗಳಿವೆ. ದಿನಕರ ದೇಸಾಯಿ ಮತ್ತು ಗಿರಿ ಪಿಕಳೆ ಅವರ ಒಳಗಿನ ತೀಕ್ಷ್ಣ ಒಳನೋಟಗಳನ್ನು ದಕ್ಕಿಸಿಕೊಂಡಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ವಿಷ್ಣು ನಾಯ್ಕ ಮತ್ತು ರಾಘವೇಂದ್ರ ಪ್ರಕಾಶನದ ಆಶಯಗಳನ್ನು ಹಣತೆ ಮುಂದುವರಿಸಲು ಪ್ರಯತ್ನಿಸುತ್ತದೆ ಎಂದರು.ಪ್ರಾಚಾರ್ಯರಾದ ಡಾ. ಪ್ರೀತಿ ಭಂಡರ್ಕರ್, ಕುಮಟಾ ರೋಟರಿ ಅಧ್ಯಕ್ಷ ಎನ್.ಆರ್. ಗಜು, ಕವಿ ಗಣಪತಿ ಹೆಗಡೆ ಕೊಂಡದಕುಳಿ, ಹಣತೆ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಉದಯ ಮಡಿವಾಳ, ಬಿಇಡಿ ವಿದ್ಯಾರ್ಥಿ ಪ್ರದೀಪ ಮರಾಠೆ, ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ, ವಿದ್ಯಾರ್ಥಿನಿ ನಾಗಶ್ರೀ ಮುಕ್ರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.