ರಸ್ತೆ ದಾಟಿದ ಒಂಟಿ ಸಲಗ: ಭಯ ಭೀತರಾದ ಜನ

KannadaprabhaNewsNetwork |  
Published : May 31, 2025, 01:13 AM ISTUpdated : May 31, 2025, 01:14 AM IST
ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಕುಶಾಲಪುರದ ಮುಖ್ಯ ರಸ್ತೆ ದಾಟುತ್ತಿರುವ ರೇಡಿಯೋ ಕಾಲರ್ ಅಳಡಿಸಿದ ಒಂಟಿ ಸಲಗ | Kannada Prabha

ಸಾರಾಂಶ

ನರಸಿಹಂರಾಜಪುರ ಕೆಲವು ದಿನಗಳಿಂದ ಮರೆಯಾಗಿದ್ದ ಕಾಡಾನೆಗಳ ಕಾಟ ಮತ್ತೆ ಶುರುವಾಗಿದ್ದು ಶುಕ್ರವಾರ ಮುತ್ತಿನಕೊಪ್ಪ ಗ್ರಾಮದ ಚಬ್ಬೆ ನಾಡು, ಜಂಬಳ್ಳಿ, ಕುಶಾಲಪುರದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಒಂಟಿ ಆನೆಯೊಂದು ವಸತಿ ಪ್ರದೇಶದಲ್ಲೇ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಠಿಸಿತು.

- ಗಾಬರಿಗೊಂಡ ಜನರು । ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ । ಮತ್ತೆ ಕಾಡಿಗೆ ಸೇರಿದ ಆನೆ

ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರ

ಕೆಲವು ದಿನಗಳಿಂದ ಮರೆಯಾಗಿದ್ದ ಕಾಡಾನೆಗಳ ಕಾಟ ಮತ್ತೆ ಶುರುವಾಗಿದ್ದು ಶುಕ್ರವಾರ ಮುತ್ತಿನಕೊಪ್ಪ ಗ್ರಾಮದ ಚಬ್ಬೆ ನಾಡು, ಜಂಬಳ್ಳಿ, ಕುಶಾಲಪುರದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಒಂಟಿ ಆನೆಯೊಂದು ವಸತಿ ಪ್ರದೇಶದಲ್ಲೇ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಠಿಸಿತು.

ಶುಕ್ರವಾರ ಲಕ್ಕವಳ್ಳಿ ಭದ್ರಾ ಹಿನ್ನೀರಿನ ಕಡೆಯಿಂದ ದೇವಗಲ್ ಎಸ್ಟೇಟ್, ಹೊಸಕೊಪ್ಪ ಮಾರ್ಗವಾಗಿ ಮಡಬೂರಿಗೆ ಬಂದು ಬೆಳಗಿನ ಜಾವ ಚಬ್ಬೆನಾಡಿನ ಸಿ.ಡಿ.ಶ್ರೀನಿವಾಸ ಎಂಬುವರ ತೋಟದಲ್ಲಿ ಈ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ಸುದ್ದಿ ಯನ್ನು ಅರಣ್ಯ ಇಲಾಖೆ ಹಾಗೂ ಎಲಿಫೆಂಟ್‌ ಟಾಸ್ಕ್ ಪೋರ್ಸ್ ಗಳಿಗೆ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಟಾಸ್ಕ್ ಪೋರ್ಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಕಾಡಾನೆಯನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ಪ್ರಾರಂಭಿಸಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಕಾಡಾನೆ ಮುತ್ತಿನಕೊಪ್ಪ- ಶಂಕರಾಪುರ ಮಧ್ಯೆ ಬರುವ ಕುಶಾಲಪುರಕ್ಕೆ ಆಗಮಿಸಿ ಶಾಲೆ ಗೇಟು ಮುರಿದು ಅಂಗನವಾಡಿ ಸಮೀಪವೇ ಹಾದು ಹೋಗಿ ಮುಖ್ಯ ರಸ್ತೆ ದಾಟಿ ಹೋಗಿದೆ. ಈ ಸಂದರ್ಭದಲ್ಲಿ ನೂರಾರು ಜನರು ಕಾಡಾನೆ ಓಡಾಟ ವೀಕ್ಷಿಸಿದರು. ನಂತರ ಈ ಒಂಟಿ ಸಲಗ ಸಾತ್ಕೋಳಿ ಮೂಲಕ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿದೆ.

ಸ್ಥಳಕ್ಕೆ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ವೀಣಾ, ಅರಣ್ಯ ರಕ್ಷಕ ತಬರೇಜ್‌, ಮುತ್ತಿನಕೊಪ್ಪ ವೃತ್ತದ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತು ಪಾಲಕ ರಾಘವೇಂದ್ರ, ಲಕ್ಕವಳ್ಳಿಯ ವೈಡ್ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ: ಹಗಲು ಹೊತ್ತಿನಲ್ಲೇ ಯಾವುದೇ ಭಯ ಇಲ್ಲದೆ ಜನವಸತಿ ಪ್ರದೇಶದಲ್ಲಿ ಓಡಾಟ ಮಾಡಿದ ಒಂಟಿ ಸಲಗದಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಸರ್ಕಾರ ಆದಷ್ಟು ಬೇಗ ಕಾಡಾನೆಗಳು ನಾಡಿಗೆ ಬಾರದಂತೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ