ಡಿಎಂಕೆ ಜೊತೆ ಮೈತ್ರಿಗೆ ಕಾವೇರಿ ನೀರು ಮಾರಾಟ- ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Apr 24, 2024, 02:21 AM IST
23ಕೆಎಂಎನ್‌ಡಿ-8ಮದ್ದೂರಿನಲ್ಲಿ ನಡೆದ ಜೆಡಿಎಸ್‌-ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅಭಿಮಾನಿಗಳು ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೇಗಿಲು ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಡಿಎಂಕೆ ಜೊತೆಗಿನ ಮೈತ್ರಿಗಾಗಿ ಕಾವೇರಿ ನೀರನ್ನೇ ನೀವು ಮಾರಾಟ ಮಾಡಿದ್ದೀರಿ ಎಂದು ಎಂದು ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕಠಿಣವಾಗಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರುಡಿಎಂಕೆ ಜೊತೆಗಿನ ಮೈತ್ರಿಗಾಗಿ ಕಾವೇರಿ ನೀರನ್ನೇ ನೀವು ಮಾರಾಟ ಮಾಡಿದ್ದೀರಿ ಎಂದು ಎಂದು ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕಠಿಣವಾಗಿ ಟೀಕಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಷದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವಂತೆ ಸಿಎಂ ನಮಗೆ ಹೇಳುತ್ತಾರೆ. ನಾವು ಮೇಕೆದಾಟು ಯೋಜನೆಗೆ ಕೇಂದ್ರದಿಂದ 5 ನಿಮಿಷದಲ್ಲಿ ಕೇಂದ್ರದಿಂದ ಅನುಮತಿ ಕೊಡಿಸುತ್ತೇವೆ. ಆದರೆ, ಡಿಎಂಕೆ ಜೊತೆಗಿನ ಮೈತ್ರಿಗಾಗಿ ಕಾವೇರಿ ನೀರನ್ನೇ ನೀವು ಮಾರಾಟ ಮಾಡಿದ್ದೀರಲ್ಲ ಇದಕ್ಕೇನು ಹೇಳುವಿರಿ. ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡೋಲ್ಲ ಎಂದು ಡಿಎಂಕೆಯವರ ಪ್ರಣಾಳಿಕೆಗೆ ಬಗ್ಗೆ ನಿಮ್ಮ ಬಳಿ ಉತ್ತರವೇ ಇಲ್ಲ ಎಂದು ಕಟುವಾಗಿ ಹೇಳಿದರು.

ಕಾವೇರಿ ನೀರಿನ ವಿಷಯವಾಗಿ ದೇವೇಗೌಡರನ್ನು ಪ್ರಶ್ನಿಸುವ ನೈತಿಕತೆ ಸಿಎಂ ಸಿದ್ದರಾಮಯ್ಯನವರಿಗಿಲ್ಲ. ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿದ್ದರೆ ಅದು ದೇವೇಗೌಡರಿಂದ ಮಾತ್ರ. ಅವರ ಹೋರಾಟದ ಫಲವಾಗಿ 14.75 ಟಿಎಂಸಿ ಅಡಿ ನೀರು ಉಳಿಸಿಕೊಟ್ಟರು. ಈಗಲೂ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ದೇವೇಗೌಡರು ಬೆಂಗಳೂರಿನಲ್ಲಿ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈ ವಿಷಯ ತಿಳಿದ ಮೋದಿ ಅವರು ಕೇಂದ್ರದ ಮಂತ್ರಿಗಳನ್ನು ಕಳುಹಿಸಿ ಅಂತಹ ಕಠಿಣ ನಿರ್ಧಾರ ಮಾಡದಂತೆ ತಡೆದಿದ್ದರು. ದೇವೇಗೌಡರು ಇಳಿ ವಯಸ್ಸಿನಲ್ಲೂ ವ್ಹೀಲ್‌ಚೇರ್‌ನಲ್ಲಿ ಲೋಕಸಭೆಗೆ ಹೋಗಿ ಮೇಕೆದಾಟು ಯೋಜನೆಯ ಸ್ಥಿತಿ-ಗತಿಗಳ ವಿವರವನ್ನು ಪಡೆದುಕೊಂಡಿದ್ದಾರೆ. ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂದರು.

ಕೆಲವು ದಿನಗಳ ಹಿಂದೆ ನನ್ನನ್ನು ಕರೆದ ದೇವೇಗೌಡರು, ನಾನು ಈಗಲೇ ಸಾಯುವುದಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಕಾವೇರಿ ಕಣಿವೆ ರೈತರಿಗೆ ಆಗಿರುವ ಅನ್ಯಾಯವನ್ನು ನಿನ್ನಿಂದಲೇ ಪರಿಹಾರ ದೊರಕುವಂತೆ ಮಾಡುತ್ತೇನೆ. ನನಗಿನ್ನೂ ಆ ಶಕ್ತಿ ಇದೆ ಎಂದು ಹೇಳಿದ್ದಾರೆ. ದೇವೇಗೌಡರ ಮಾತಿಗೆ ಕೇಂದ್ರದಲ್ಲಿ ಅಷ್ಟೇ ಗೌರವವಿದೆ. ಮೋದಿ ಬಾಗಿಲ ಬಳಿ ಬಂದು ಗೌಡರನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಮೋದಿ ಅವರು ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿಯ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರಿಗೆ ನೀಡುತ್ತೇನೆ ಎಂದಿದ್ದಾರೆ. ಇದರಿಂದ ಭವಿಷ್ಯದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುಕೂಲಗಳು ಸಿಗುವ ಭರವಸೆ ಸಿಕ್ಕಿದೆ ಎಂಬುದಾಗಿ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಬಂದಾಗಲೆಲ್ಲಾ ಬರಗಾಲವನ್ನು ಜೊತೆಯಲ್ಲೇ ಕರೆತರುತ್ತಾರೆ. ರೈತರಿಗೆ ಬರಗಾಲವಾದರೆ ಕಾಂಗ್ರೆಸ್‌ ನಾಯಕರಿಗೆ ಅದು ಸುವರ್ಣಕಾಲ. ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಭಾಗ್ಯಗಳಿಂದ ಜನರನ್ನು, ರೈತರನ್ನು ಉದ್ಧಾರ ಮಾಡಲು ಎಂದಿಗೂ ಸಾಧ್ಯವಿಲ್ಲ. ಭಾಗ್ಯಗಳನ್ನು ಅಭಿವೃದ್ಧಿ ಎನ್ನಲಾಗುವುದಿಲ್ಲ. ಬಡವರ ಬದುಕನ್ನು ರಕ್ಷಣೆ ಮಾಡದೆ ಭಿಕ್ಷುಕರನ್ನಾಗಿ ಮಾಡುತ್ತಿದ್ದಾರೆ. ನಿಜವಾದ ಅಭಿವೃದ್ಧಿ ಏನೆಂಬುದೇ ಕಾಂಗ್ರೆಸ್ಸಿಗರು ಮರೆತಿದ್ದಾರೆ ಎಂದು ಟೀಕಿಸಿದರು.

ನೀರಾವರಿ ಯೋಜನೆಗಳು, ರಸ್ತೆ -ಸೇತುವೆ ಸಂಪರ್ಕ ಜಾಲ, ಕೆರೆಗಳಿಗೆ ನೀರು ತುಂಬಿಸುವುದು, ಕೊನೆಯ ಭಾಗಕ್ಕೆ ನೀರು ತಲುಪಿಸುವುದು, ಶಾಲಾ-ಕಾಲೇಜುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳು ಅಭಿವೃದ್ಧಿಯ ಸಂಕೇತ. ಈ ವಿಷಯವಾಗಿ ಈಗಿನ ಶಾಸಕರು ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯೆ ತಾರಾ ಅನುರಾಧಾ, ಬಿಜೆಪಿ ಮುಖಂಡ ಎಸ್‌.ಪಿ.ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಗುರುಚರಣ್‌, ಅಣ್ಣೂರು ರಾಜಣ್ಣ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಕ್‌ ಜತೆ ರಾಜ್ಯ ಕಾಂಗ್ರೆಸ್‌ ಕೈಜೋಡಿಸಿದೆಯೇ? : ಬಿಜೆಪಿ
ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ