ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೀಪಾವಳಿ ನಿಮಿತ್ತ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಬಯಲು ಪ್ರದೇಶದಲ್ಲಿ ಇದೇ ನವೆಂಬರ್ 10 ರಿಂದ 15 ರವರೆಗೆ ಬಯಲು ಪ್ರದೇಶದಲ್ಲಿ ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡು ಪಟಾಕಿಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿ ದಿವ್ಯಾಪ್ರಭು ಆದೇಶಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಮಾರಾಟ ಮಾಡಲಾಗುವ, ತಯಾರಾದ ಹಸಿರು ಪಟಾಕಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿ ಕರ ಆಸ್ತಿ ಸುರಕ್ಷತೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ, ಜಿಲ್ಲೆಯಲ್ಲಿ ಈಗಾಗಲೇ ಅಧಿಕೃತ ಪರವಾನಗಿ ಹೊಂದಿರುವವರು ಮತ್ತು 2023ನೇ ಸಾಲಿಗೆ ಪರವಾನಗಿ ನವೀಕರಿಸಿಕೊಂಡಿರುವವರು ನಗರ, ಪಟ್ಟಣಗಳಲ್ಲಿ ಬಯಲು ಪ್ರದೇಶದಲ್ಲಿ ಹಂಗಾಮಿ ಶೆಡ್ಗಳನ್ನು ಹಾಕಿಕೊಂಡು ಪಟಾಕಿಗಳನ್ನು ಮಾರಾಟ ಮಾಡಲು ಆದೇಶಿಸಲಾಗಿದೆ. ಯಾವ ಪರವಾನಗಿದಾರರೂ ಅಧಿಕೃತ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿ ವ್ಯಾಪಾರ ಮಾಡುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಸಿರು ಪಟಾಕಿ ಮಾರಾಟದ ಮಳಿಗೆಗಳನ್ನು ನವೆಂಬರ್ 10 ರಿಂದ 15ರವರೆಗೆ ಮಾತ್ರ ತೆರೆದಿರತಕ್ಕದ್ದು, ಪರವಾನಗಿದಾರರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯಬೇಕು. ಬೇರೆ ಸ್ಥಳಗಳಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು, ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ ಪ್ರಾಧಿಕಾರಿಗಳು ಅನುಮತಿಸಬೇಕು.ಮಾರಾಟಕ್ಕಾಗಿ ಸಂಗ್ರಹಿಸಲಾದ ಯಾವುದೇ ಪಟಾಕಿಗಳು ಲಿಥಿಯಂ, ಅಂಟೆಮನಿ ಪಾದರಸ, ಅರ್ಸೆನಿಕ್, ಸೀಸ ಮತ್ತು ಸ್ಟ್ರಾಂಷಿಯಂ ಕ್ರೋಮೆಟ್ ಸಂಯುಕ್ತಗಳನ್ನು ಹೊಂದಿರಬಾರದು. ಹಸಿರು ಪಟಾಕಿಗಳನ್ನು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಗೊಂಡು ಉತ್ಪಾದಿಸಲಾಗಿದೆಯೇ ಎಂಬುದರ ಬಗ್ಗೆ ಮತ್ತು ಮಾರಾಟ ಮಾಡಲಾಗುತ್ತಿರುವ ಪಟಾಕಿಗಳ ಮೇಲೆ ನಿಗದಿಪಡಿಸಿರುವ ಲೋಗೋ ಹಾಗೂ ಬಾರ್ ಕೋಡ್ ನ್ನು ಮೊಬೈಲ್ನಲ್ಲಿ ಡೌನ್ ಲೋಡ್ ಮಾಡಿ ಪರಿಶೀಲಿಸಬಹುದಾಗಿದೆ. ಹಸಿರು ಪಟಾಕಿಗಳನ್ನು ಹಚ್ಚಿಸುವ ಅಥವಾ ಸಿಡಿಸುವ ಸಮಯ ರಾತ್ರಿ 8 ರಿಂದ 10 ಗಂಟೆಯವರೆಗೆ ಸೀಮಿತಗೊಳಿಸಿರುವುದರಿಂದ ಈ ಬಗ್ಗೆ ನಿಗಾವಹಿಸಬೇಕು.ಮಳಿಗೆಗೆ ನಿರ್ಮಾಣಕ್ಕೆ ಮಾರ್ಗಸೂಚಿ : ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು, ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ್ ಅಂತರವಿರಬೇಕು. ಪ್ರತಿಯೊಂದು ಮಾರಾಟ ಮಳಿಗೆಯಲ್ಲಿ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ನೀಡಿರುವ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ಕಾಣುವಂತೆ ಪ್ರದರ್ಶಿಸುವುದು. ಪರವಾನಗಿ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಹಸಿರು ಪಟಾಕಿ ಗಳ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಧನಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದರೆ ಬೆಂಕಿಯನ್ನು ತಡೆಗಟ್ಟುವ ಸಾಧನಗಳನ್ನು ನಿರ್ಮಾಣಕ್ಕೆ ಉಪಯೋಗಿಸಬೇಕು. ಪ್ರತಿಯೊಂದು ಮಳಿಗೆಗಳ ಗಾತ್ರ 10:10 ಅಡಿಗೆ ಸೀಮಿತ ಗೊಳಿಸಬೇಕು, ಒಳಗೆ ಯಾವುದೇ ದಾಸ್ತಾನಿನ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು. ರಾತ್ರಿ ವೇಳೆಯಲ್ಲಿ ಮಳಿಗೆಗಳಲ್ಲಿ ಯಾರೂ ಮಲಗಬಾರದು. ಪ್ರತಿಯೊಂದು ಮಳಿಗೆಯಲ್ಲಿ ಪರವಾನಗಿದಾರರು ಅಗ್ನಿ ನಿವಾರಣಾ ಮತ್ತು ಅಗ್ನಿ ಶಮನ ವ್ಯವಸ್ಥೆ ಬಗ್ಗೆ ಅಗತ್ಯ ಸಲಕರಣೆಗಳನ್ನು ಶೇಖರಿಸಿಟ್ಟಿರಬೇಕು. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು. ಪ್ರತಿಯೊಂದು ಮಳಿಗೆಯಲ್ಲಿ 9 ಲೀಟರ್ ಸಾಮರ್ಥ್ಯದ ಒಂದು ವಾಟರ್ ಪ್ರೆಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್ನಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು. ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ, ಪಾಲಿಕೆ, ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಶಿಸ್ತಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ. ಪಟಾಕಿ ಮಾರಾಟಕ್ಕೆ ಜಿಲ್ಲೆಯಲ್ಲಿ ನಿಗದಿಪಡಿಸಿದ ಸ್ಥಳಗಳು:1. ಚಿತ್ರದುರ್ಗ ನಗರದ ಹಳೇ ಮಾದ್ಯಮಿಕ ಶಾಲಾ ಮೈದಾನ.
2. ಹಿರಿಯೂರು ನಗರದ ನೆಹರು ಮೈದಾನ, 3.ಚಳ್ಳಕೆರೆ ನಗರದ ಬಿಸಿ ನೀರು ಮುದ್ದಪ್ಪ ಪ್ರೌಢಶಾಲೆ ಆವರಣ.4.ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಕನ್ನಡ ಮತ್ತು ಉರ್ದು ಪಾಠಶಾಲೆ ಆವರಣ.
5.ಹೊಸದುರ್ಗ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ, ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ಪೊಲೀಸ್ ಕ್ವಾಟ್ರರ್ಸ್ ಎದುರು 6. ಮೊಳಕಾಲ್ಮೂರು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ಈ ಪ್ರದೇಶದಲ್ಲಿ ಹಂಗಾಮಿ ಶೆಡ್ಗಳನ್ನು ಹಾಕಿಕೊಂಡು ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು. ತಯಾರಾದ ಸ್ಪೋಟಕ ವಸ್ತುಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲು ಸ್ಪೋಟಕ ವಸ್ತುಗಳ ಜಂಟಿ ನಿಯಂತ್ರಕರು ಚೆನ್ನೈ ಇವರಿಂದ 100 ಕೆ.ಜಿ. ಯಷ್ಟು ಹಸಿರು ಪಟಾಕಿ ಹೊಂದಲು ಮತ್ತು 50 ಕೆ.ಜಿ.ಯಷ್ಟು ದಾಸ್ತಾನು ಮಾಡಿ ಮಾರಾಟ ಮಾಡಲು ಚಿತ್ರದುರ್ಗ ಜಿಲ್ಲಾ ದಂಡಾಧಿಕಾರಿಗಳು ಇವರಿಂದ ಪರವಾನಿಗೆ ಹೊಂದಿರುವವರು ಮೇಲ್ಕಂಡ ಅವಧಿಯಲ್ಲಿ ನಿಗದಿತ ಸ್ಥಳದ ಬಯಲು ಪ್ರದೇಶದಲ್ಲಿ ಪಟಾಕಿಗಳನ್ನು ಮಾರಾಟ ಮಾಡಲು ಆದೇಶಿಸಿದೆ.ಮಾರ್ಗಸೂಚಿಗಳು ಪಾಲಿಸದಿದ್ದರೆ ಪಟಾಕಿ ಮುಟ್ಟುಗೋಲು : ಸರ್ವೋಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕಾರಿಗಳು ಎಲ್ಲಾ ಹಸಿರು ಪಟಾಕಿಗಳ ಮೇಲೆ ಪ್ಯಾಕೆಟ್ಗಳನ್ನು ಯಾದೃಚ್ಛಿಕವಾಗಿ ಆಗಿ ಸಂಗ್ರಹಿಸಿ, ನಿಗದಿತ ವಿಧಿ ವಿಧಾನಗಳ ಮೂಲಕ ಅವುಗಳ ಶಬ್ದ ಮಟ್ಟವನ್ನು ಮಾಪನ ಮಾಡಬೇಕು ಮತ್ತು ನಿಗದಿತ ಗುಣಮಾಪನಗಳಿಗೆ ಸರಿಹೊಂದದಿದ್ದಲ್ಲಿ ಅವುಗಳನ್ನು ಸಹಾ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯವು ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಅವುಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಮತ್ತು ಹಚ್ಚುವಂತಿಲ್ಲ. ನ್ಯಾಯಾಲಯದ ಆದೇಶದಂತೆ ಶಬ್ದಮಟ್ಟ ಮಾನಿಟರಿಂಗ್ ಮಾಡಲು ಕ್ರಮ ವಹಿಸಬೇಕು. ಮಾದರಿಗಳು ಮತ್ತು ಗುಣ ಮಾಪನಗಳ ವಿಶ್ಲೇಷಣೆ ಹಾಗೂ ಶಬ್ದ ಮಟ್ಟ ಮಾನಿಟರಿಂಗ್ ವಿಷಯದಲ್ಲಿ ಡಿ.ಎಸ್.ಓ. ಡಾ. ರಾಘವೇಂದ್ರ ದೂರವಾಣಿ ಸಂಖ್ಯೆ 9880046189 ಗೆ ಸಂಪರ್ಕಿಸಬಹುದು.
ಪಟಾಕಿಗಳು ಅಂಗಡಿಗೆ ಷರತ್ತುಗಳು ; ಹಂಗಾಮಿ ಶೆಡ್ಗಳನ್ನು ಸ್ಥಾಪಿಸುವ ಮುನ್ನ ಪರವಾನಗಿದಾರರು ಸ್ಥಳೀಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಇವರನ್ನು ಸಂಪರ್ಕಿಸಿ ಸೂಕ್ತ ರೀತಿಯಲ್ಲಿ ಶೇಡ್ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಹಂಗಾಮಿ ಶೇಡ್ಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಸ್ಥಾಪಿಸಬೇಕು. ಪರವಾನಿಗೆದಾರರು, ಅವರ ಶೆಡ್ಗಳಲ್ಲಿ ಸುಲಭವಾಗಿ ಬೆಂಕಿ ಹತ್ತುವ ಇತರೆ ವಸ್ತುಗಳನ್ನು ಇಡಬಾರದು. ಅಡುಗೆ ಅಥವಾ ಧೂಮಪಾನ ನಿಷೇಧಿಸಿದ ಬಗ್ಗೆ ಫಲಕಗಳನ್ನು ಹಾಕಬೇಕು. ಪರವಾನಿಗೆದಾರರು ಅವರು ಹೊಂದಿರುವ ಅಧಿಕೃತ ಪರವಾನಿಗೆ ಪತ್ರವನ್ನು ಮಾರಾಟ ಸ್ಥಳದಲ್ಲಿ ಇಟ್ಟುಕೊಂಡಿರಬೇಕು ಮತ್ತು ಪರಿಶೀಲನೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ವಿಚಾರಿಸಿದಾಗ ತೋರಿಸಬೇಕು. ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು, ಮಾರಾಟಗಾರರು ಸರ್ಕಾರದ ಪರಿಷ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.