1939 ರಲ್ಲಿ ಗಮಿಸಿದ್ದ ಸಲೀಂ ಅಲಿ । ರು, 1266 ಮೀ ಎತ್ತರದ ಕಲ್ಲಿನ ಶಿಖರಗಳ ಮೇಲೆ ನಿಂತು ಆಲ್ಪೈನ್ ಸ್ವಿಫ್ಟ್ ಪಕ್ಷಿಯನ್ನು ದಾಖಲಿಸಿದ್ದರು.
ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ, ತುಮಕೂರು ಪಾಳು ಬಿದ್ದಿದ್ದ ಸಲೀಂ ಆಲಿ ತಂಗಿದ್ದ ಕೊಠಡಿಗೆ ಪುನರುಜ್ಜೀವನಗೊಂಡು ನಳನಳಿಸುತ್ತಿದೆ. ಆದರೆ, ಪಕ್ಷಿಗಳ ಬಗ್ಗೆ ಮಹತ್ತರವಾದ ಅಧ್ಯಯನ ಮಾಡಲು ಕೇಂದ್ರವನ್ನಾಗಿ ರೂಪಿಸಬೇಕೆಂದು ಹಕ್ಕೊತ್ತಾಯ ಆರಂಭವಾಗಿದೆ. 1939ರಲ್ಲಿ ಪಕ್ಷಿಗಳ ಅಧ್ಯಯನಕ್ಕೆಂದೇ ಮೈಸೂಸು ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಸಲೀಂ ಆಲಿ ಅವರು ಆ ವರ್ಷದ ಡಿಸೆಂಬರ್ ನಲ್ಲಿ ತುಮಕೂರಿನ ನಾಮದ ಚಿಲುಮೆಯ ಅತಿಥಿ ಗೃಹದಲ್ಲಿ ತಂಗಿದ್ದರು. ವರ್ಷಾಂತ್ಯದ ಸಮಯದಲ್ಲಿ ತಂಗಿದ್ದ ಕಾರಣ 1940 ರ ಹೊಸ ವರ್ಷವನ್ನು ಇದೇ ಜಾಗದಲ್ಲಿ ಆಚರಿಸಿದ್ದರು. ಸೂರ್ಯ ಅಸ್ತಮವಾಗುವ ಸಮಯಕ್ಕೆ ಸರಿಯಾಗಿ ಇಲ್ಲಿನ ದೇವರಾಯನದುರ್ಗ ಬೆಟ್ಟದ ಯೋಗಾನರಸಿಂಹ ದೇವಾಲಯದ ಮೇಲಿರುವ 1268 ಮೀ ಎತ್ತರದ ಕಲ್ಲಿನ ಶಿಖರಗಳ ಮೇಲೆ ನಿಂತು ಸಲೀಂ ಆಲಿ ತಮ್ಮ ಬೈನಾಕ್ಯುಲರ್ ನೋಟದ ವ್ಯಾಪ್ತಿಯಲ್ಲಿ ಸುತ್ತಲೂ ಹಾರಾಡುತ್ತಿದ್ದ ಆಲ್ಪೈನ್ ಸ್ವಿಫ್ಟ್ ಗಳನ್ನು ಗಮನಿಸಿದರು. ಅರಣ್ಯ ಪ್ರದೇಶದಲ್ಲಿ ಅವರು ನಡೆಸಿದ ಸಮೀಕ್ಷೆಗಳಲ್ಲಿ ಮುಖ್ಯವಾಗಿ ಎಲ್ಲೂ ದಾಖಲಾಗದ ಆಲ್ಪೈನ್ ಸ್ವಿಫ್ಟ್ ಗಳ ಸಂಯೋಗದ ಅಭ್ಯಾಸಗಳನ್ನು ಅವುಗಳ ಗುಣಲಕ್ಷಣಗಳನ್ನು ಗಮನಿಸಿ ದಾಖಲಿಸಿದ್ದರು. ಪರಿಸರ ಮತ್ತು ಪಕ್ಷಿ ಸಂಕುಲ ನೋಡಿ ಸಲೀಂ ಆಲಿ ಮೂರು ದಿವಸ ತಂಗಿದ್ದು ಹಲವಾರು ಪಕ್ಷಿಗಳ ಮಾದರಿಯನ್ನು ಸಂಗ್ರಹಿಸಿದ್ದರು. ಬಳಿಕ ಹೆಚ್ಚಿನ ಅಧ್ಯಯನಕ್ಕಾಗಿ ಇದೇ ಸ್ಥಳಕ್ಕೆ ಮೂರು ಬಾರಿ ಭೇಟಿ ನೀಡಿದ್ದರು. ದೇವರಾಯನದುರ್ಗ ಪ್ರದೇಶದಲ್ಲಿ ಅವರು ಕಂಡು ಗುರುತಿಸಿದ ಪಕ್ಷಿ ಪ್ರಬೇಧದ ವಿವರಗಳನ್ನು ಈಗ ಪಕ್ಷಿ ಅಧ್ಯಯನ ಮಾಡುವರಿಗೆ ಮಾರ್ಗದರ್ಶನವಾಗಿದೆ. ಪಾಳು ಬಿದ್ದಿದ್ದ ಸಲೀಂ ಆಲಿ ತಂಗಿದ್ದ ಕೊಠಡಿಯನ್ನು ಆಧುನೀಕರಣಗೊಂಡಿದೆ. ಆದರೆ, ಸಲೀಂ ಆಲಿ ಅಧ್ಯಯನ ಕೈಗೊಂಡಿದ್ದರಿಂದ ಇದಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವುದರಿಂದ ನಾಮದ ಚಿಲುಮೆ ಹಾಗೂ ದೇವರಾಯನದುರ್ಗ ಸುತ್ತ ಪ್ರದೇಶದಲ್ಲಿ ಇರುವ ಅಪರೂಪದ ಪಕ್ಷಿಗಳ ಬಗ್ಗೆಯೂ ಅಧ್ಯಯನ ಕೈಗೊಳ್ಳಲು ಸರ್ಕಾರ ಅನುವು ಮಾಡಿಕೊಡಬೇಕಾಗಿದೆ. ದೇವರಾಯನದುರ್ಗ, ನಾಮದ ಚಿಲುಮೆ ಸೇರಿದಂತೆ 42.2 ಚೆದರ ಕಿ.ಮೀ. ಸಂರಕ್ಷಿತ ಅರಣ್ಯವಿದೆ. ಈ ಹಿಂದೆ ಹುಲಿಯ ಹೆಜ್ಜೆ ಗುರುತು ಕೂಡ ಈ ಅರಣ್ಯದಲ್ಲಿ ಪತ್ತೆಯಾಗಿತ್ತು. ಇದನ್ನು ಹೊರೆತುಪಡಿಸಿದರೆ ಚಿರತೆ, ಕರಡಿ, ಕಾಡು ಹಂದಿ, ಮುಳ್ಳು ಹಂದಿ, ಹೆಬ್ಬಾವು ಹಲವಾರು ಜಾತಿಯ ಪ್ರಾಣಿಗಳು, ಸರಿಸೃಪಗಳು ಇಲ್ಲಿವೆ. ಅಲ್ಲದೇ ಸಲೀಂ ಆಲಿ ತಂಗಿದ್ದ ಕೊಠಡಿ ಬಳಿಯೇ ಜಿಂಕೆವನ ಇದ್ದು ಅದನ್ನು ಕೂಡ ಸಂರಕ್ಷಿಸಬೇಕಾದ ತುರ್ತು ಇದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.