ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಮತ್ತು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ರಕ್ತದಾನ ಜಾಗೃತಿ ಅಭಿಯಾನ ‘ಸಂವೇದನ’ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಮತ್ತು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ರಕ್ತದಾನ ಜಾಗೃತಿ ಅಭಿಯಾನ ‘ಸಂವೇದನ’ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಉಡುಪಿಯ ರಕ್ತ ನಿಧಿ ಘಟಕದ ಮುಖ್ಯ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಮಾತನಾಡಿ, ಉಡುಪಿ ಜಿಲ್ಲೆ ರಕ್ತದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ರಕ್ತದಾನ ಮಾಡುವವರಿಲ್ಲ ಕನಿಷ್ಠ ಹೆಮೋಗ್ಲೋಬಿನ್ 12. 5 ಜಿಎಂ% ಇರಬೇಕು ಹಾಗೂ 65 ವರ್ಷ ವಯಸ್ಸು ತನಕ ನಿಯಮಿತವಾಗಿ ರಕ್ತದಾನ ಮಾಡಬಹುದು ಎಂಬ ನಿಯಮಗಳನ್ನು ವಿವರಿಸಿದರು. ದಾನ ಮಾಡಲು ಮುನ್ನ ಆರೋಗ್ಯ ತಪಾಸಣೆ, ಔಷಧ ಸೇವನೆಯಿಲ್ಲದಿರುವುದು ಹಾಗೂ ಕಡಿಮೆವಾದರೂ 6 ಗಂಟೆ ನಿದ್ದೆ ಮಾಡಿರಬೇಕು ಎಂಬುದನ್ನು ಮನವರಿಕೆ ಮಾಡಿಸಿದರು. ಮಹಿಳೆಯರು 4 ತಿಂಗಳಿಗೆ ಒಮ್ಮೆ, ಪುರುಷರು 3 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ಎಂದರು.ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ಅವರು ‘ರಕ್ತವೇ ಜೀವ’ ಎಂದು ಪ್ರಾಚೀನ ವೈದ್ಯಶಾಸ್ತ್ರದಲ್ಲಿ ಹೇಳಿರುವುದನ್ನು ಉಲ್ಲೇಖಿಸಿದರು. ಆಯುರ್ವೇದದ ಪ್ರಕಾರ ರಕ್ತವನ್ನು ನಾಲ್ಕನೇ ದೋಷ ಎಂದು ಪರಿಗಣಿಸಲಾಗಿದೆ. ವಿಶ್ವದಾದ್ಯಂತ 5 ಕೋಟಿ ಜನರಿಗೆ ವರ್ಷವಿಡೀ ರಕ್ತದ ಅಗತ್ಯವಿರುತ್ತದೆ, ಆದರೆ 50-60 % ಅಗತ್ಯ ಮಾತ್ರ ರಕ್ತದಾನದ ಮೂಲಕ ಪೂರೈಸಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ 38, 000 ರಕ್ತದಾನಗಳು ಅಗತ್ಯವಿದ್ದು, ಪ್ರತಿ 2 ಸೆಕೆಂಡಿಗೆ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಎದುರಾಗುತ್ತದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಎಂ.ಎಂ.ಕೋಟ್ರೇಶ್, ಮುನಿಯಾಲ್ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಅಪರ್ಣಾ ಸುರೇಂದ್ರ ಹಾಗೂ ಮುಖ್ಯ ಆಡಳಿತಾಧಿಕಾರಿ ಯೋಗೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ನವನೀತ್ ಕಾರ್ಯಕ್ರಮ ಸಂಯೋಜಿಸಿದರು, ಡಾ. ಆಶಿತಾ ಕಾರ್ಯಕ್ರಮ ನಿರೂಪಿಸಿದರು. ಡಾ. ರೀನಿ ಡಯಾಸ್ ಸ್ವಾಗತಿಸಿದರು ಮತ್ತು ಡಾ. ರಶ್ಮಿ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ 145 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.