ಕೊಪ್ಪಳ: ತಾಲೂಕಿನ ಹಟ್ಟಿ ಗ್ರಾಮವನ್ನು 2026ನೇ ಸಾಲಿನ ಸಂಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ರಾಜ್ಯ ಮಟ್ಟದ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಟ್ಟಿ ಗ್ರಾಮದಲ್ಲಿ ಆ. 16ರಂದು ಸಂಜೆ 4.30 ಗಂಟೆಗೆ ಜರುಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ 10 ಗ್ರಾಮಗಳಿಗೆ ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆಯೂ ಜರುಗಲಿದೆ. ಹಟ್ಟಿ ಗ್ರಾಮದ ರಸ್ತೆಯ ದುರಸ್ತಿಗೆ ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸಾರ್ವಜನಿಕರಿಗೆ ಅಗತ್ಯ ಬಸ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಗಾಂಧಿ ಬಳಗದ ಸದಸ್ಯರಾದ ಸಾವಿತ್ರಿ ಮುಜುಮದಾರ, ಪ್ರಮೋದ ಕುಲಕರ್ಣಿ, ಅಬಕಾರಿ ಡಿವೈಎಸ್ಪಿ ಶಾಂತೇಶ ಕಮತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಮರೇಶ ಹಾವಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕ ನಾಗೇಶ ಇದ್ದರು.