ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ನಗರಕ್ಕೆ ನವೋದಯ ಶಾಲೆ, ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು, ತೋಟಗಾರಿಕೆ ಬೆಳೆಗಳಿಗೆ ಶೀತಲೀಕರಣ ಘಟಕ, ಸ್ಕಿಲ್ ಇಂಡಿಯಾ ಸೆಂಟರ್ ಹಾಗೂ ಸುಸಜ್ಜಿತ ಕ್ರೀಡಾ ತರಬೇತಿ ಸಂಕೀರ್ಣ ಯೋಜನೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿಕೊಡಬೇಕು. ಕೋಳೂರು ಕಾಟ್ರಳ್ಳಿಯಲ್ಲಿ ನಿರ್ಮಾಣದ ಹಂತದಲ್ಲಿರುವ ಶ್ರೀ ಗವಿಮಠದ ಗುರುಕುಲ ಉಚಿತ ವಸತಿ ನಿಲಯ ಯೋಜನೆಗೆ ವಿಶೇಷ ಅನುದಾನ ಒದಗಿಸಿ ಕೊಡಬೇಕು. ಈ ಎಲ್ಲ ಯೋಜನೆಗಳು ಬಡ ಹಾಗೂ ಮಾಧ್ಯಮ ಕುಟುಂಬದವರ ಭವಿಷ್ಯದ ಭರವಸೆಗಳು. ಈ ಯೋಜನೆಗಳು ಕೊಪ್ಪಳವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡಲು ಪೂರಕವಾಗುತ್ತವೆ ಎಂದು ಒತ್ತಿ ಹೇಳಿದರು.
ಕೇಂದ್ರದ ವಿವಿಧ ಖಾತೆಗಳ ಸಚಿವರ ಜತೆಗೆ ವೈಯಕ್ತಿಕವಾಗಿ ಮಾತನಾಡಿ, ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇನೆ. ಕೊಪ್ಪಳವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಪರಿವರ್ತಿಸಲು ಅಗತ್ಯವಿರುವ ಸಹಕಾರ ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.