ಹಾವೇರಿ: ತಾಲೂಕಿನ ಸಂಗೂರ ಗ್ರಾಮದಲ್ಲಿರುವ ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಪ್ರಸಕ್ತ 2025-26ನೇ ಸಾಲಿನ ಕಬ್ಬು ನುರಿಸುವ ಪ್ರಕ್ರಿಯೆಗೆ ಕಬ್ಬು ಬೆಳೆಗಾರರು, ರೈತ ಮುಖಂಡರು ಹಾಗೂ ಕಾರ್ಖಾನೆ ಅಧಿಕಾರಿಗಳು ಚಾಲನೆ ನೀಡಿದರು.ಈ ವೇಳೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಸಕ್ಕರೆ ಕಾರ್ಖಾನೆಯವರು ರೈತರಿಗೆ ಮೋಸ ಮಾಡದೆ ಕಬ್ಬು ಸಾಗಿಸಿದ 14 ದಿನಗಳ ಒಳಗಾಗಿ ರೈತರಿಗೆ ಹಣ ಪಾವತಿಸಬೇಕು. ಹಿಂದಿನ ವರ್ಷದ ಬಾಕಿ ಹಣವನ್ನು ಪಾವತಿಸಿಲ್ಲ, ಬಾಕಿ ಉಳಿಸಿಕೊಂಡ ಹಣವನ್ನು ವಾರದೊಳಗೆ ಕ್ಲಿಯರ್ ಮಾಡಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೆ ಭರಿಸಿಕೊಳ್ಳಬೇಕು. ರೈತರಿಗೆ 3,550 ರು. ದರ ಕೊಡಬೇಕು. ಕಬ್ಬು ಕಟಾವು ಮಾಡಲು ಬಂದ ಕೂಲಿ ಕಾರ್ಮಿಕರ ತಂಡದವರನ್ನು ಕಾರ್ಖಾನೆಯವರು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ರೈತರಿಗೆ ಕಟಾವು ಮಾಡುವ ತಂಡದವರಿಂದ ತೊಂದರೆ ಆಗದಂತೆ ಕಾರ್ಖಾನೆಯವರು ನೋಡಿಕೊಳ್ಳಬೇಕು. ಕಾರ್ಖಾನೆಯ ಮಾಲೀಕರು ಬೇಗನೆ ರೈತರ ಜೊತೆ ಚರ್ಚಿಸಿ ದರವನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿದರು.ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಪ್ಪ ವರ್ದಿ ಮಾತನಾಡಿ, ಪ್ರತಿ ವರ್ಷವೂ ಸಹಿತ ರಿಕವರಿಯಲ್ಲಿ ಕಾರ್ಖಾನೆಯವರು ರೈತರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ನಮ್ಮ ಆಡಳಿತ ಮಂಡಳಿ ಕಾರ್ಖಾನೆಯನ್ನು ನಡೆಸುವಾಗ 10.50 ಮತ್ತು 11ರ ವರೆಗೆ ರಿಕವರಿ ಬರುತ್ತಿತ್ತು. ಈಗ ಗುತ್ತಿಗೆದಾರರು 9.42 ಬರುವ ಹಾಗೆ ಮಾಡಿದ್ದಾರೆ. ಇದರಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತದೆ. ಕಾರ್ಖಾನೆಯ ಮಾಲೀಕರು ಎಫ್ಆರ್ಪಿ ಎನ್ನದೇ ರೈತರಿಗೆ ಹೆಚ್ಚಿನ ಬೆಲೆ ಕೊಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಟರಾಜ್, ಸಿಬ್ಬಂದಿಯವರಾದ ಪ್ರಸನ್ನ, ರಾಮಚಂದ್ರಪ್ಪ, ಹನುಮಂತಪ್ಪ, ಮುನಿ ಕುಮಾರ್, ರೈತ ಮುಖಂಡರಾದ ಫಕೀರಪ್ಪ ಹುಲ್ಲಾಳ, ಪ್ರಕಾಶಗೌಡ ಪಾಟೀಲ, ರಾಜಶೇಖರ ಹಲಸೂರ, ಪ್ರಕಾಶ ಬೆಂಚಳ್ಳಿ, ಮಂಜುನಾಥ ಕ್ಯಾತಪ್ಪನವರ, ಮಲ್ಲಪ್ಪ ಕೋರಿ, ನಿರ್ದೇಶಕರಾದ ರಾಮಣ್ಣ ಮಾದಪ್ಪನವರ, ದಾನೇಶಪ್ಪ ಕೆಂಗೊಂಡ, ಫಕ್ಕೀರಪ್ಪ ಕಟಾರಿ, ರಾಜು ಹೊನ್ನತ್ತಿ, ಕೊಡೆಪ್ಪ ದ್ಯಾವಣ್ಣನವರ, ನಂದೇಪ್ಪ ಲಮಾಣಿ, ಸಂಕಣ್ಣನವರ ಸೇರಿದಂತೆ ಅನೇಕರು ಇದ್ದರು.