ಬಿ.ಎಸ್.ಸುನೀಲ್
ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಳ್ಳಿಗಾಡಿನ ಸಂಸ್ಕೃತಿ ಉಳಿಸಲು, ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಸೊಗಡನ್ನು ಬಿಂಬಿಸಲು ಭಾರತಿ ವಿದ್ಯಾ ಸಂಸ್ಥೆಯಲ್ಲಿಂದು ಸಂಕ್ರಾಂತಿ ಸಂಭ್ರಮವನ್ನು ಆಯೋಜಿಸಲಾಗಿದೆ.
ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಿರುವ ಭಾರತಿ ವಿದ್ಯಾ ಸಂಸ್ಥೆ ಕಳೆದ ಕೆಲ ವರ್ಷಗಳಿಂದ ರೈತರ ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಂಡು ಬರುತ್ತಿದ್ದು, ಸೋಮವಾರವೂ ಅದ್ಧೂರಿಯಾಗಿ ಆಚರಿಸಲು ಸಜ್ಜುಗೊಂಡಿದೆ.ಮಾಜಿ ಸಂಸದ ದಿ.ಜಿ.ಮಾದೇಗೌಡ ಶ್ರಮದಿಂದ ಕಟ್ಟಿ ಬೆಳೆಸಿದ ಭಾರತೀ ವಿದ್ಯಾ ಸಂಸ್ಥೆ ಗುಣ ಮಟ್ಟದ ಶಿಕ್ಷಣ ನೀಡುತ್ತಾ ತನ್ನದೆ ಚಾಪು ಮೂಡಿಸಿ ರಾಜ್ಯದಲ್ಲೆ ದೊಡ್ಡ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಬೆಳವಣಿಗೆ ಕಾಣುತ್ತಿದೆ. ಸಂಸ್ಥೆ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಸಂಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲು ಹಲವು ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕೆ ಸಂಕ್ರಾಂತಿ ಸಂಭ್ರಮ ಸಾಕ್ಷಿಯಾಗಿದೆ. ಪುತ್ರ ಆಶಯ್ ಮಧು ಕೂಡ ಸಂಸ್ಥೆ ಏಳ್ಗೆಗೆ ಶ್ರಮಿಸುತಿದ್ದಾರೆ.
ಎತ್ತಿನ ಗಾಡಿಗಳಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಕೆ.ಎಂ.ದೊಡ್ಡಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ಬೊಂಬೆ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ ಸೇರಿದಂತೆ 40ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ.
ಕಾಲೇಜಿನ ಕುವೆಂಪು ಸಭಾಂಗಣದ ಆವರಣದಲ್ಲಿ ಕಬ್ಬು ಸೇರಿದಂತೆ ಭತ್ತ, ರಾಗಿ ಮೊದಲಾದ ಧಾನ್ಯಗಳನ್ನು ರಾಶಿ ಮಾಡಿ ರೈತ ದಿನ ನಿತ್ಯ ಬಳಸುವ ವಸ್ತುಗಳನ್ನಿಟ್ಟು ಪೂಜೆ ಸಲ್ಲಿಕೆ, ಕಾಲೇಜಿನ 12 ಸಾವಿರ ವಿದ್ಯಾರ್ಥಿಗಳು, ಎಲ್ಲಾ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಭಾಗವಹಿಸುವುದು, ವಿದ್ಯಾರ್ಥಿಗಳೇ ತಯಾರಿಸಿದ ತಿಂಡಿ, ತಿನಿಸುಗಳ ಮಾರಾಟ ಮತ್ತು ಪ್ರದರ್ಶನ ಹಾಗೂ ರೈತ ಸಂತೆಯು ಸಂಕ್ರಾಂತಿ ಸಂಭ್ರಮಕ್ಕೆ ಮೆರಗು ನೀಡಲಿವೆ.
- ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯರು, ಸಂಸ್ಥೆ ಅಧ್ಯಕ್ಷರು
- ಪ್ರೊ.ಎಸ್.ನಾಗರಾಜು, ನಿರ್ದೇಶಕ, ಭಾರತೀ ಸ್ನಾತಕೋತ್ತರ ವಿಭಾಗ