ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನಿಕತೆ ಬೆಳೆದಂತೆಲ್ಲಾ ಸಂಕ್ರಾಂತಿಯ ಸಾಂಪ್ರದಾಯಿಕ ಸೊಬಗು ಮರೆಯಾಗುತ್ತಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ವಿಷಾದಿಸಿದರು.ಇಲ್ಲಿನ ಕಾವೇರಿನಗರ ಬಡಾವಣೆ ಎರಡನೇ ಹಂತದ ಬಸ್ ನಿಲ್ದಾಣ ಬಳಿ ಗೋ ರಕ್ಷಣಾ ಸಮಿತಿ ಹಾಗೂ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ಗೋ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲೋ ಒಂದು ಕಡೆ ನಾವೆಲ್ಲರೂ ಚಿಕ್ಕಂದಿನಲ್ಲಿ ನೋಡಿದ ವಿಜೃಂಭಣೆಯ ಸಂಕ್ರಾಂತಿ ವೈಭವವನ್ನು ಇಂದಿನ ಮಕ್ಕಳು ನೋಡಲು ಸಾಧ್ಯವಾಗುತ್ತಿಲ್ಲ, ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿದ್ದ ಸಂಕ್ರಾಂತಿ ಸಂಭ್ರಮ ದಿನೇ ದಿನೇ ಮರೆಯಾಗುತ್ತಿದೆ ಎಂದರು.ನಗರ ಪ್ರದೇಶಕ್ಕೆ ಸೇರಿದ ಕಾವೇರಿ ನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಒಗ್ಗೂಡಿ ಗೋ ಪೂಜೆ ಆಯೋಜಿಸಿರುವುದು ಶ್ಲಾಘನೀಯ. ಯುವಕರು ಕೃಷಿಯತ್ತ ಆಕರ್ಷಿತರಾದರೆ ಕಳೆದುಹೋಗುತ್ತಿರುವ ಸಂಕ್ರಾಂತಿ ಹಬ್ಬದ ಗತ ವೈಭವವನ್ನು ಮರುಕಳಿಸುವಂತೆ ಮಾಡಬಹುದು ಎಂದು ನುಡಿದರು.
ಈ ವರ್ಷ ಭಾರತೀಯರಿಗೆ ಐತಿಹಾಸಕ ವರ್ಷವಾಗಿ ಹರ್ಷ ತರಲಿದೆ, ೫೦೦ ವರ್ಷಗಳ ಹೋರಾಟದ ಫಲ ಅಯೋಧ್ಯಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ, ಇಂತಹ ಕಾಲಘಟ್ಟದಲ್ಲಿ ನಾವು ಮತ್ತಷ್ಟು ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದರು.ಜೆಡಿಎಸ್ ಮುಖಂಡ ಬಿ.ರಾಮಚಂದ್ರ ಮಾತನಾಡಿ, ಸ್ಥಳೀಯ ನಿವಾಸಿಗಳು ಒಗ್ಗೂಡಿ ಗೋ ಪೂಜೆ ಮಾಡುತ್ತಿರುವುದು ಖುಷಿ ತಂದಿದೆ. ನಾವು ಚಿಕ್ಕವರಿದ್ದಾಗ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿರುವುದನ್ನು ನೋಡಿ ಬೆಳೆದಿದ್ದೇವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕಣದಲ್ಲಿ ರಾಶಿಕಟ್ಟಿ ಪೂಜೆ ಮಾಡಿ, ಉತ್ಸವ ಮಾಡುತ್ತಿದ್ದರು, ನಂತರದ ದಿನಗಳಲ್ಲಿ ಇವೆಲ್ಲಾ ಮರೆತುಹೋಗಿತ್ತು. ಪ್ರಸ್ತುತ ನಗರ ಪ್ರದೇಶದಲ್ಲಿ ರಾಶಿ ಮತ್ತು ರಾಸು ಪೂಜೆ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಮೆರುಗು ತಂದಿರುವುದು ಸಂತಸ ಮೂಡಿಸಿದೆ ಎಂದರು.ಇದೇ ವೇಳೆ ನಿವಾಸಿಗಳು ಗೋ ಪೂಜೆ ನೆರವೇರಿಸಿ, ಭತ್ತ-ರಾಗಿ ರಾಶಿಗೂ ಪೂಜೆ ಸಲ್ಲಿಸಿದರು. ಪೊಂಗಲ್ ಮತ್ತು ಸಿಹಿ ವಿತರಣೆ ನಡೆಯಿತು. ಮಕ್ಕಳು ಮತ್ತು ಯುವಕರು ತಮಟೆ-ನಗಾರಿ ನಾದಕ್ಕೆ ಕುಣಿದು ಕುಪ್ಪಳಿಸಿದರು. ಪ್ರಮುಖ ಬೀದಿಗಳಲ್ಲಿ ಗೋವುಗಳನ್ನು ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಗೋರಕ್ಷಣಾ ಸಮಿತಿ ಮುಖಂಡ ಹೆಚ್.ಆರ್.ಅಶೋಕ್ಕುಮಾರ್, ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ಅಪ್ಪಾಜಪ್ಪ, ಪ್ರಮೋದ್, ವೀರಭದ್ರ, ಡಾ.ಎಸ್.ನಾರಾಯಣ್, ನಾರಾಯಣಸ್ವಾಮಿ, ನವೀನ್, ಜಯರಾಂ, ಸಂದೇಶ್ ಮತ್ತು ಗೋ ರಕ್ಷಣಾ ಸಮಿತಿ ಸದಸ್ಯರು ಹಾಜರಿದ್ದರು.