ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ದೇವರಾಜ ಅರಸು ಬಡಾವಣೆ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳ 47ನೇ ಪುಣ್ಯಾರಾಧನೆ, ಕಾಯಕ ಯೋಗಿ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಅಭಿನವ ಅನ್ನದಾನ ಮಹಾಸ್ವಾಮೀಜಿ ತೃತೀಯ ವರ್ಷದ ಪುಣ್ಯಾರಾಧನೆ, ಶಿವಾನುಭವ ಸಂಪದ ಹಾಗೂ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗದಗಿನಲ್ಲಿ ಒಂದೇ ಕಡೆ 6 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್ಕೆಜಿಯಿಂದ ಪಿಜಿವರೆಗೆ ಅಷ್ಟೊಂದು ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಸಾಧ್ಯವಾಗಿದ್ದು ಹಿರಿಯ ಶ್ರೀಗಳ ಪರಿಶ್ರಮದಿಂದ. ಇಂದು ದೇಶ, ವಿದೇಶಗಳಲ್ಲಿ ಶ್ರೀಮಠದಲ್ಲಿ ಓದಿ, ಭವಿಷ್ಯ ಕಟ್ಟಿಕೊಂಡ ಸಾಧಕರಿದ್ದಾರೆ. 1913ರಲ್ಲಿ ಸಂಸ್ಕೃತ ಶಾಲೆಯೊಂದಿಗೆ ಆರಂಭವಾದ ಶ್ರೀಮಠದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಶ್ರೀಮಠದ ಸಂಸ್ಥೆಯಲ್ಲಿ ಬೋಧನೆಗೆ ಆಯ್ಕೆಗೆ ಐದಾರು ದಶಕದ ಹಿಂದೆಯೇ ಹಿರಿಯ ಗುರುಗಳು ಕ್ಯಾಂಪಸ್ ಸಂದರ್ಶನ ಮಾಡುತ್ತಿದ್ದರೆಂದರೆ ಶಿಕ್ಷಣದ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಅದೆಷ್ಟು ಕಾಳಜಿ ಹೊಂದಿದ್ದರು ಎಂಬುದು ವೇದ್ಯವಾಗುತ್ತದೆ ಎಂದು ಹೇಳಿದರು.ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆಯಾಗದಿದ್ದರೆ ಹಿರಿಯ ಅಜ್ಜೋರಿಗೆ ಪೂಜೆಗೆಂದು ಗ್ರಾಮಸ್ಥರು ತಮ್ಮ ಊರಿಗೆ ಕರೆಸಿಕೊಳ್ಳುತ್ತಿದ್ದರು. ಗುರುಗಳು ಲಿಂಗಪೂಜೆ ಮಾಡಿದ ಕೆಲ ಹೊತ್ತಿನಲ್ಲಿಯೇ ಮಳೆಯಾಗಿರುವ ಸಾಲು ಸಾಲು ನಿದರ್ಶನ ಇಂದಿಗೂ ಅಲ್ಲಿನ ಹಿರಿಯರು ನೆನಸುತ್ತಾರೆ. ಮಳೆ ಅಜ್ಜೋರು ಅಂತಲೇ ಹಿರಿಯರನ್ನು ಭಕ್ತರು ಸ್ಮರಿಸುತ್ತಾರೆ. ಮಹಿಳೆಯರೇ ತೇರು ಎಳೆಯಲು ಅವಕಾಶ ನೀಡಿದ್ದು, ಶೈಕ್ಷಣಿಕ, ಧಾರ್ಮಿಕ ಸಮಾನತೆಗಾಗಿ ಶ್ರೀಗಳು ಶ್ರಮಿಸಿದ್ದರು. ಒಮ್ಮೆ ಯಾರಾದರೂ ಕೊರಳಿಗೆ ಲಿಂಗ ಕಟ್ಟಿದರೆ ಅಂತಹವರನ್ನು ಭಿನ್ನ ದೃಷ್ಟಿಯಿಂದ ನೋಡಬಾರದು ಎಂಬುದು ಹಿರಿಯ ಗುರುಗಳ ಮಾತಾಗಿತ್ತು ಎಂದು ಮೆಲಕು ಹಾಕಿದರು.
ಸನ್ಮಾನಿತರಾಗಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಜ್ಞಾನ, ಅನ್ನ ದಾಸೋಹದ ಪರಂಪರೆಯನ್ನು ಹಾಲಕೆರೆ ಶ್ರೀಮಠ ಮುಂದುವರಿಸಿಕೊಂಡು ಬರುತ್ತಿದೆ. ಇಂತಹ ಮಠಗಳಲ್ಲಿ ಆಶ್ರಯ ಪಡೆದು, ಬದುಕನ್ನು ಕಟ್ಟಿಕೊಂಡವರು ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ನಮ್ಮ ಪರಂಪರೆ, ಧಾರ್ಮಿಕ ಕಾರ್ಯಗಳನ್ನು ಹೆಚ್ಚಾಗಿ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚಾರ, ವಿಚಾರಗಳು, ಆಚರಣೆಗಳ ಮಹತ್ವ, ಸಂಸ್ಕಾರ, ಸದ್ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕು. ಶ್ರೀಮಠದ ಸಮುದಾಯ ಭವನದ ಸೇರಿದಂತೆ ಯಾವುದೇ ಬೇಡಿಕೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನಿಮ್ಮ ಜೊತೆಗಿರುತ್ತಾರೆ ಎಂದು ತಿಳಿಸಿದರು.