- ನ್ಯಾಮತಿ ತಾಲೂಕು ಕಚೇರಿಯಲ್ಲಿ ಸರ್ವಜ್ಞ ಜಯಂತ್ಯುತ್ಸವ - - -
ನ್ಯಾಮತಿ: ತ್ರಿಪದಿ, ವಚನಗಳ ಮೂಲಕ ಸರ್ವಜ್ಞ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಅವರ ರಚನೆಗಳ ತಿರುಳನ್ನು ಅರಿತು ಬದುಕಿದರೆ ಎಲ್ಲರ ಜೀವನ ಸಾರ್ಥಕವಾಗುತ್ತದೆ. ಸರ್ವಕಾಲಕ್ಕೂ ತ್ರಿಪದಿಗಳು ಶ್ರೇಷ್ಠವಾಗಿವೆ ಎಂದು ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ವತಿಯಿಂದ ನಡೆದ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದ ಮುಖಂಡ ಕುಂಬಾರ ಹೊಸಮನೆ ಮಲ್ಲಿಕಾರ್ಜುನ ಮಾತನಾಡಿ, ಆಧುನಿಕರಣ ಮತ್ತು ಪ್ಲಾಸ್ಟಿಕ್ ಹಾವಳಿಯಿಂದಾಗಿ ಕುಂಬಾರರ ಕುಲಕಸುಬಿಗೆ ಪೆಟ್ಟುಬೀಳುತ್ತಿದೆ. ಎಷ್ಟೇ ಆಧುನಿಕರಣಗೊಂಡರೂ ಸಹಿತ ಮಡಿಕೆ, ಕುಡಿಕೆಯ ಆಹಾರ ಎಲ್ಲರಿಗೂ ಆರೋಗ್ಯಕರವಾಗಿದೆ. ಇದು ಅರಿತು ಬಹಳಷ್ಟು ಶ್ರೀಮಂತರೂ ಮಡಿಕೆ ಬಳಕೆ ಮಾಡಲು ಆಸಕ್ತಿ ಹೊಂದುತ್ತಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ವೀರಗಾಸೆ ತಂಡದವರು ಚಮಾಳ (ಸಮಾಳ) ವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕರಿಬಸಪ್ಪ, ಚನ್ನೇಶಪ್ಪ, ಗಣೇಶಪ್ಪ, ರುದ್ರೇಶ್, ಮಧುರಾಜ್, ಕೆಂಚಿಕೊಪ್ಪ ರಾಜಣ್ಣ, ರೇಣುಕಪ್ಪ, ಗುರು, ಹರೀಶ, ಸಮಾಜದ ಮುಖಂಡರು, ತಾಲೂಕು ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.