ವೇತನ ತಾರತಮ್ಯ ವಿರೋಧಿಸಿ ಭೂಮಾಪಕರ ಆಗ್ರಹ

KannadaprabhaNewsNetwork | Published : Jun 21, 2025 12:49 AM

ಪ್ರತಿ ಕಡತಕ್ಕೆ 1200 ರಂತೆ ತಿಂಗಳಿಗೆ ಕನಿಷ್ಟ 15000 ರಿಂದ 20,000 ವೇತನವನ್ನು ಪಾವತಿಯಾಗಬಹುದು. ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ವೇತನವು ಸಾಕಾಗುವುದಿಲ್ಲ. ನಾವು ಸರ್ಕಾರಿ ಭೂಮಾಪಕರು ಮಾಡುವ ಕೆಲಸಕ್ಕೆ ಸಮಾನವಾಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಅವರಿಗೆ ನೀಡುವಷ್ಟು ವೇತನ ನಮಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಕಲ್ಪಿಸುವವರೆಗೆ ಜಿಲ್ಲೆಯ ಎಲ್ಲಾ ಪರವಾನಗಿ ಭೂಮಾಪಕರು ಸೇವೆ ಸ್ಥಗಿತಗೊಳಿಸುವುದಾಗಿ ಭೂ ಮಾಪನ ಇಲಾಖೆಯ ಉಪ ನಿರ್ದೇಶಕ (ಡಿಡಿಎಲ್ಆರ್) ಮತ್ತು ಸಹಾಯಕ ನಿರ್ದೇಶಕ (ಎಡಿಎಲ್ಆರ್) ರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರವಾನಗಿ ಭೂಮಾಪಕರ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ದಿನ ನಿತ್ಯ ವಸ್ತುಗಳ ಬೆಲೆ ಏರಿಕೆ ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದು ಪ್ರತಿ ಕಡತಕ್ಕೆ ಇಲಾಖೆ ನೀಡುವ 1200 ರೂಗಳಲ್ಲಿ , ಜವಾನರಿಗೆ, ಕಡತ ತಯಾರಿಸುವುದಕ್ಕೆ ತಗಲುವ ವೆಚ್ಚ ಇತರೆ ಕೆಲಸಗಳಿಗೇ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.

ವೇತನ ತಾರತಮ್ಯ ಸರಿಪಡಿಸಿ

ಪ್ರತಿ ಕಡತಕ್ಕೆ 1200 ರಂತೆ ತಿಂಗಳಿಗೆ ಕನಿಷ್ಟ 15000 ರಿಂದ 20,000 ವೇತನವನ್ನು ಪಾವತಿಯಾಗಬಹುದು. ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ವೇತನವು ಸಾಕಾಗುವುದಿಲ್ಲ. ನಾವು ಸರ್ಕಾರಿ ಭೂಮಾಪಕರು ಮಾಡುವ ಕೆಲಸಕ್ಕೆ ಸಮಾನವಾಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಅವರಿಗೆ ನೀಡುವಷ್ಟು ವೇತನ ನಮಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಾವುಗಳು ಅಡವಿ ಕೆಲಸ ಮಾಡುವುದರಿಂದ ನಮಗೆ ಯಾವುದೇ ರೀತಿಯ ಜೀವಭದ್ರತೆ, ಆರೋಗ್ಯದ್ದಲ್ಲಾಗಲೀ ರೈತರಿಂದಾಗಲೀ ಮತ್ತು ಅಪಘಾತದಿಂದಾಗಲೀ ತೊಂದರೆಯಾದಾಗ ಮತ್ತು ಅಳತೆ ಸಮಯದಲ್ಲಿ ಪ್ರಕೃತಿ ವಿಕೋಪದಿಂದ ಯಾವುದೇ ತೊಂದರೆಗಳು ಉಂಟಾದಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ಆದ ಕಾರಣ ನಮ್ಮ ಕುಟುಂಬಕ್ಕೂ ಭದ್ರತೆ ಇಲ್ಲದಂತಾಗಿದೆ ಎ₹ದರು.

ಬಾಂದು ಜವಾನರ ಅಗತ್ಯ

ಪ್ರತಿ ಪರವಾನಗಿ ಭೂಮಾಪಕರಿಗೂ ಬಾಂದು ಜವಾನರ ಅವಶ್ಯಕತೆ ಇರುತ್ತದೆ. ಬಾಂದು ಜವಾನರನ್ನು ಸರ್ಕಾರವೇ ನೇಮಿಸಿಕೊಂಡಬೇಕು ಮತ್ತು ನಮಗೆ ಸರ್ಕಾರದ ಸೇವಾ ಭದ್ರತೆ ಮತ್ತು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು. ಕಛೇರಿಯಲ್ಲಿ ಪರವಾನಗಿ ಭೂಮಾಪಕರಿಗೆ ಸರಿಯಾಗಿ ಗೌರವ ನೀಡ ಬೇಕೆಂದರು.ಇದುವರೆಗೂ ಕೆರೆಗಳ ಅಳತೆ ಬಾಬ್ತು ವೇತನ ನೀಡಿಲ್ಲ. ಎರಡು ತಿಂಗಳುಗಳಿಂದ ದರಖಾಸ್ತು ಪೋಡಿ ಆಂದೋಲನದಲ್ಲಿ ಅಳತೆ ಕಾರ್ಯ ಮಾಡಿದ್ದು ಯಾವುದೇ ವೇತನವು ಪಾವತಿಯಾಗಿಲ್ಲ. ಪೋಡಿಮುಕ್ತ ಸ್ವಾಮಿತ್ವ ಯೋಜನೆ, ಆಕಾರಬಂಧು ಡಿಜಿಟೈಜೆಷನ್ ಗೆನಮ್ಮನ್ನು ನಿಯೋಜನೆ ಮಾಡಿಕೊಂಡಿದ್ದು ಸರಿಯಾದ ವೇತನ ನೀಡುತ್ತಿಲ್ಲ. ಆದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದರೆ ಮಾತ್ರ ಕೆಲಸಗಳನ್ನು ಮುಂದುವರೆಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಲಾಗಿನ್ ಸ್ಥಗಿತಗೊಳಿಸಿ

ಸದ್ಯದ ಪರಿಸ್ಥಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಕಾರಣ ನಾವುಗಳು ಎಲ್ಲರೂ ಸಂಪೂರ್ಣವಾಗಿ ಕೆಲಸವನ್ನು ಸ್ಥಗಿತಗೊಳಿಸಿದ್ದು ನಮ್ಮಗಳಿಂದ ರೈತರಿಗೆ ತೊಂದರೆಯಾಗದಂತೆ ಸಾಮೂಹಿಕವಾಗಿ ಎಲ್ಲ ಪರವಾನಗಿ ಭೂಮಾಪಕರ ಲಾಗಿನ್ ಅನ್ನು ಡಿಆ್ಯಕ್ಟಿವೇಟ್ ಮಾಡಬೇಕೆಂದು ನಾವುಗಳು ಎಲ್ಲರೂ ಇಲಾಖೆಯ ಮುಖ್ಯಸ್ಥರಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ಈ ವೇಳೆ ಜಿಲ್ಲೆಯ ಎಲ್ಲಾ ಪರವಾನಗಿ ಭೂ ಮಾಪಕರುಗಳು ಇದ್ದರು.