ಸಮಾಜದಲ್ಲಿನ ಕಂದಾಚಾರಗಳನ್ನು ಹೊಡೆದೊಡಿಸಲು ತಮ್ಮ ಚಿಂತನೆಗಳನ್ನು ನೀಡಿದ ಸಂತ ಸೇವಾಲಾಲರು ವಾಸ್ತವಿಕ ಜಗತ್ತಿನಲ್ಲಿ ಬದುಕಿದ ದಾರ್ಶನಿಕ ವ್ಯಕ್ತಿಯಾಗಿದ್ದಾರೆ ಎಂದು ಉಪನ್ಯಾಸಕಿ ಅನುಪಮಾ.ಪಿ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿನ ಕಂದಾಚಾರಗಳನ್ನು ಹೊಡೆದೊಡಿಸಲು ತಮ್ಮ ಚಿಂತನೆಗಳನ್ನು ನೀಡಿದ ಸಂತ ಸೇವಾಲಾಲರು ವಾಸ್ತವಿಕ ಜಗತ್ತಿನಲ್ಲಿ ಬದುಕಿದ ದಾರ್ಶನಿಕ ವ್ಯಕ್ತಿಯಾಗಿದ್ದಾರೆ ಎಂದು ಉಪನ್ಯಾಸಕಿ ಅನುಪಮಾ.ಪಿ ಬಣ್ಣಿಸಿದರು. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೊರಗೊಂಡನಕೊಪ್ಪ ಗ್ರಾಮದಲ್ಲಿ ಸಂತ ಸೇವಾಲಾಲರು ಶ್ರೀ ಭೀಮ ನಾಯಕ್, ಧರ್ಮಿಣಿ ಯಾಡಿ (ಮಾತೆ) ಯ ಮಗನಾಗಿ ಜನಿಸಿದರು. ಮುಂದೆ ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದರು. ಅಲ್ಲದೇ ಜಗದಂಭೆಯ ಆರಾಧಕರಾಗಿ ಜೀವನದುದ್ದಕ್ಕೂ, ಬ್ರಹ್ಮಚರ್ಯರಾಗಿಯೇ ಉಳಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟವನ್ನು ಮಾಡಿದರು ಎಂದು ತಿಳಿಸಿದರು.
ಸೇವಾಲಾಲ್ ದನಗಾಹಿ ಗೋಪಾಲಕನಾಗಿ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಿಗೆ ತಿಳಿಸಿದವರು. ಜೀವನ ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿ, ಅರಿಷ್ಯಡ್ವರ್ಗಗಳನ್ನು ಸುಟ್ಟು, ಪ್ರಾಮಾಣಿಕರಾಗಿ ಜೀವಿಸಿ ಎಂದು ಸಂದೇಶ ಸಾರಿದ್ದು, ಅವರ ಆದರ್ಶ ಪಾಲಿಸಬೇಕಿದೆ ಎಂದು ಹೇಳಿದರು.
ತಹಸೀಲ್ದಾರ ಕವಿತಾ, ಸಮಾಜ ಕಲ್ಯಾಣ ಇಲಾಖೆಯ ಪುಂಡಲೀಕ್ ಮಾನವರ, ಪಾಲಿಕೆಯ ಸುಮಿತ್ರರಾಜು ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಯ್ಯುಬ್ ದ್ರಾಕ್ಷಿ, ಮಾಜಿ ಶಾಸಕ ಮನೋಹರ್ ಐನಾಪೂರ, ರಾಜಪಾಲ ಚವ್ವಾಣ, ಕೇಶವ ಗಂಗಾರಾಮ ರಾಠೋಡ, ಧನಸಿಂಗ ಮಾಹಾರಾಜ, ಗೋಪಾಲ ಮಹಾರಾಜ ಗುಂಡು ಮಹಾರಾಜ, ಕೆ.ಜೆ. ರಾಠೋಡ ಉಪಸ್ಥಿತರಿದ್ದರು. ಭಾವಚಿತ್ರ ಮೆರವಣಿಗೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಕಂದಗಲ್ ಹನುಂತರಾಯ ರಂಗವಂದಿರದವರೆಗೆ ಸಂತ ಸೇವಲಾಲ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ವಾದ್ಯಮೇಳ, ಗೊಂಬೆ ಮೆರವಣಿಗೆ ಹಾಗೂ ಬಂಜಾರ ಸಮುದಾಯದ ಯುವಕರು, ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ನೃತ್ಯ ಮಾಡಿ ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.