ಕನ್ನಡಪ್ರಭ ವಾರ್ತೆ, ಚಾಮರಾಜನಗರ ಸಮಾಜ ಅಸಮಾನತೆಯಲ್ಲಿ ಬಳಲುತ್ತಾ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.
ನಗರದ ಡಾ. ರಾಜ್ಕುಮಾರ್ ರಂಗಮಂದಿರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಸಾವಿತ್ರಿಭಾಯಿ ಫುಲೆ ಜನ್ಮದಿನಾಚರಣೆ ಮತ್ತು ಸಾವಿತ್ರಿಭಾಯಿಫುಲೆ ಪ್ರಶಸ್ತಿ ಪ್ರಧಾನ ಹಾಗೂ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಕುರಿತ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪತಿ ಜ್ಯೋತಿಬಾ ಅವರಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜೀವನ ರೋಚಕವಾದುದು. ಸಮಾಜದ ಬಹಿಷ್ಕಾರ ಹಾಗೂ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರೂ, ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಅವರನ್ನು ಎಂದೂ ಮರೆಯಬಾರದು ಎಂದು ಹೇಳಿದರು.
೧೮೪೮ರಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರ ಹೊಮ್ಮಿದ ಸಾವಿತ್ರಿ ಬಾಯಿ ಫುಲೆ ಹಿಂದುಳಿದ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುತ್ತಾರೆಂದು ಅವರ ಮೇಲೆ ಸೆಗಣಿ ಎರಚಲಾಯಿತು. ಕಲ್ಲುತೂರಲಾಯಿತು. ಇಂಥ ಅವಮಾನ ಸಹಿಸಿದ ಅವರ ಗಟ್ಟಿತನ ದೊಡ್ಡದು. ಅವರು ಚೀಲದಲ್ಲಿ ಎರಡು ಸೀರೆಯನ್ನು ಸದಾ ಇಟ್ಟುಕೊಳ್ಳುತ್ತಿದ್ದರು. ಶಾಲೆಯನ್ನು ಮೊದಲೇ ತಲುಪಿ ಸಗಣಿ ಎರಚಿದ ಸೀರೆ ಬಿಟ್ಟು, ಮತ್ತೊಂದು ಸೀರೆಯುಟ್ಟು ಪಾಠಕ್ಕೆ ಅಣಿಯಾಗುತ್ತಿದ್ದರು, ಇವರ ಹೆಸರಿನಲ್ಲಿ ಅಂಚೆ ಚೀಟಿಯು ಪ್ರಕಟಗೊಂಡಿದೆ ಇಂತಹ ಸಾವಿತ್ರಿಬಾಯಿ ಅವರು ನಮ್ಮೆಲ್ಲರಿಗೂ ಆದರ್ಶವಾಗಿರಲಿ ಎಂದರು.ಮಕ್ಕಳ ಉನ್ನತ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಹೊರಡಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಇದು ಚುನಾವಣಾ ವರ್ಷ ಮತ್ತು ಶೌಚಾಲಯ ಸ್ವಚ್ಛತೆ ಬಗ್ಗೆ ಹಲವಾರು ವರದಿಗಳು ಪ್ರಕಟವಾಗುತ್ತಿವೆ, ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವತ್ತ ಕಾರ್ಯೋನ್ಮುಖವಾಗಿರಿ ಎಂದು ಹೇಳಿದರು.
ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಪ್ರೋ. ಸುರೇಶ್ ಗೌತಮ್ ಮಾತನಾಡಿ, ೧೮೪೮ರ ದಶಕ ವಿಶ್ವ ಚರಿತ್ರೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಕಾಲ ಇದಕ್ಕೆ ಕಾರಣರಾದವರು ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾಯಿ ಫುಲೆ ಎಂದರು.ಶೋಷಿತ ಸಮಾಜಕ್ಕೆ ಅಕ್ಷರ ಕಲಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ತಮ್ಮ ಮಾನ ಮರ್ಯಾದೆಗಳನ್ನು ಬದಿಗಿಟ್ಟು ಮಹಾನ್ ಗುರಿಯನ್ನು ಸಾಧಿಸಿದ ಅಪ್ರತಿಮಾ ಮಹಿಳೆ, ಮನುಶಾಸ್ತ್ರವನ್ನು ಧಿಕ್ಕರಿಸಿದ ದಂಪತಿಗಳು ತಮ್ಮ ಉಸಿರು ಇರುವವರೆಗೂ ಶಾಲೆಗಳನ್ನು ತೆರೆದು ಮಹಿಳೆಯರ ಮತ್ತು ಶೋಷಿಕರ ಶಿಕ್ಷಣಕ್ಕಾಗಿ ದುಡಿದವರು ಎಂದರು.
ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಸಾವಿತ್ರಿ ಬಾಯಿ ಪುಲೆ. ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳು ಹೀಗೆ ಮಹಿಳಾ ಶೋಷಿತರ ಪರ ಹಲವಾರು ಸುಧಾರಣೆಯ ಕನಸುಗಳನ್ನು ಹೊತ್ತ ಸಾವಿತ್ರಿ ಬಾಯಿ ಫುಲೆ ದೈಹಿಕವಾಗಿ ಇಲ್ಲದಿದ್ದರೂ ಮಹಿಳಾ ಮತ್ತು ಶೋಷಿತ ಸಮುದಾಯದ ಧ್ವನಿಯಾಗಿ ಅವರು ಇಂದಿಗೂ ಜೀವಂತವಾಗಿದ್ದಾರೆ ಎಂದರು,ಮಹಿಳೆಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಫುಲೆ ದಂಪತಿಗಳ ಹಂಬಲವಾಗಿತ್ತು. ಸಾವಿತ್ರಿಬಾಯಿ ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವದು, ಸಗಣಿ ಎರಚುವುದು, ಕಲ್ಲು ತೂರುವುದು ಸಾಮಾನ್ಯವಾಗಿತ್ತು. ಆದರೆ ಸಾವಿತ್ರಿಬಾಯಿ ಇವೆಲ್ಲವನ್ನು ಬಂಡೆಯಂತೆ ಗಟ್ಟಿಯಾಗಿ ನಿಂತು ಎದುರಿಸಿದರು.
ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು ಜಾತಿ, ವರ್ಗಬೇಧ ಶಿಕ್ಷಣವನ್ನು ಕಲಿಸಿದ ಸಾವಿತ್ರಿಬಾಯಿ ತಮಗೊದಗಿದ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ ಮಹಿಳಾ ಸಂಕುಲಕ್ಕೆ ಜಾಗೃತಿಯ ರಹದಾರಿ ತೋರಿಸಿದರು. ಫುಲೆ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಅವರು ಎದೆಗುಂದದೇ ವಿಧವೆಯ ಮಗ ಯಶವಂತನನ್ನು ದತ್ತು ಸ್ವೀಕರಿಸಿದರು. ಅಲ್ಲದೇ ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಭಿನ್ನವಾದ ಶಿಶು ಕೇಂದ್ರಗಳನ್ನು ಪ್ರಾರಂಭಿಸಿ ಅವರಿಗೂ ಬದುಕು ಕಟ್ಟಿಕೊಟ್ಟರು.ಸಾವಿತ್ರಿಬಾಯಿ ಪ್ಲೇಗ್ ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಅವರು ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ೧೮೯೭ರ ಮಾರ್ಚ್ ೧೦ರಂದು ನಿಧನ ರಾದರು. ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ತೋರಿದ ಅಪಾರ ಕಾಳಜಿ, ಸಾವಿತ್ರಿಬಾಯಿಯವರು ಮಾಡಿದ ಕಾರ್ಯ ಇಂದಿಗೂ ನಮಗೆ ಪ್ರೇರಣೆಯಾಗಿದೆ. ಸಾವಿತ್ರಿಬಾಯಿ ಫುಲೆ ನಮಗೆಲ್ಲರಿಗೂ ಆದರ್ಶ ಮಹಿಳೆಯಾಗಿದ್ದಾರೆ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್ ಉನ್ನತ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಡಯಟ್ ಪ್ರಾಂಶುಪಾಲ ಎಂ. ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸೋಮಣ್ಣೇಗೌಡ ಮಾತನಾಡಿದರು.ಉತ್ತಮ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ, ನಿವೃತ್ತ ಶಿಕ್ಷಕರು ಹಾಗು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ತಾಲ್ಲೂಕು ಸಂಘದ ಅಧ್ಯಕ್ಷ ಸಿ.ಕೆ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಕೆ. ಎಸ್. ಮಾದಪ್ಪ, ಪ್ರದಾನಕಾರ್ಯದರ್ಶಿ ಮಹದೇವಸ್ವಾಮಿ, ಮೈಸೂರು ವಿಭಾಗೀಯ ಉಪಾಧ್ಯಕ್ಷ ಲಾಲಿಂಗಸ್ವಾಮಿ, ತಾಲ್ಲೂಕು ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.------------------
೩ಸಿಎಚ್ಎನ್೧ಸಾವಿತ್ರಿಭಾಫುಲೆ ಜನ್ಮದಿನಾಚರಣೆ ಮತ್ತು ಸಾವಿತ್ರಿಭಾಯಿಫುಲೆ ಪ್ರಶಸ್ತಿ ಪ್ರಧಾನ ಹಾಗೂ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಕುರಿತ ಶೈಕ್ಷಣಿಕ ಕಾರ್ಯಗಾರವನ್ನು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಉದ್ಘಾಟಿಸಿದರು.