ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ
ಕಾಪು: ಈಗಿನ ಮಕ್ಕಳಲ್ಲಿ ಕನ್ನಡದ ಬಗ್ಗೆ ಕೇಳಿದಾಗ ‘ಐ ಡೋಂಟ್ ನೋ ಕನ್ನಡ’ ಹೇಳುವುದನ್ನು ಹೇಗೆ ಬದಲಾಯಿಸಬಹುದು ಅನ್ನುವ ಮಟ್ಟಿಗೆ ಕನ್ನಡದ ಕೆಲಸ ಮಾಡಬೇಕಾಗಿದೆ. ಕನ್ನಡದ ವೈಭವವನ್ನು ಮತ್ತೆ ಸ್ಥಾಪಿಸುವ ಬಗ್ಗೆ ಕಟಿಬದ್ಧರಾಗಬೇಕು ಎಂದು ನ. ೧೫ರಂದು ಹೆಜಮಾಡಿಯಲ್ಲಿ ಜರುಗಲಿರುವ ಕಾಪು ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಹೇಳಿದರು.ಅವರು ಗುರುವಾರ ಕಟಪಾಡಿಯ ಸ್ವಗೃಹದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಸಮಿತಿಯ ವತಿಯಿಂದ ಅಧಿಕೃತವಾಗಿ ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಪು ಕಸಾಪ ವತಿಯಿಂದ ಫಕೀರ್ ಮುಹಮ್ಮದ್ ದಂಪತಿಯನ್ನು ಸನ್ಮಾನಿಸಲಾಯಿತು.ದೊಡ್ಡ ಪ್ರಶಸ್ತಿ, ಸನ್ಮಾನಗಳು ಸಿಕ್ಕರೂ, ನನ್ನೂರಿನಲ್ಲಿ ನನಗೆ ಸಮ್ಮೇಳನಾಧ್ಯಕ್ಷರ ಗೌರವ ಸಿಗುವುದು ಹೃದಯ ತುಂಬಿ ಬಂದಿದೆ. ನಮ್ಮೂರಿನ ಸನ್ನಿವೇಶಗಳು ಹಲವು ಕತೆಗಳಲ್ಲಿ ಅಡಕವಾದರೂ, ಕೆಲಸದ ನಿಮಿತ್ತ ದೂರದೂರಿನಲ್ಲಿದ್ದಾಗ ನಮ್ಮೂರಿನ ಶ್ರೇಷ್ಠತೆ ಅರಿವಾಗುತ್ತದೆ ಎಂದವರು ಹೇಳಿದರು. ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅವರ ನೇತೃತ್ವದಲ್ಲಿ ಆಮಂತ್ರಣ ಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟೆ ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷ ಮೋಹನ ಸುವರ್ಣ, ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ಡಾ. ರಘು ನಾಯ್ಕ್, ಕಾಪು ಕಸಾಪ ಜೊತೆಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಕೆ.ಆರ್.ಪಾಟ್ಕರ್ ಬಂಟಕಲ್ಲು, ದೀಪಕ್ ಬೀರ ಪಡುಬಿದ್ರೆ, ಸಮಿತಿಯ ಸದಸ್ಯರುಗಳಾದ ಸತ್ಯಸಾಯಿ ಪ್ರಸಾದ್ ಬಂಟಕಲ್ಲು, ಭಾಸ್ಕರ ಕಾಮತ್ ಕಟಪಾಡಿ, ಫಕೀರ್ ಮುಹಮ್ಮದ್ ಕುಟುಂಬಸ್ಥರು ಉಪಸ್ಥಿತರಿದ್ದರು.