ಪ.ಪಂಗಡಕ್ಕೂ ಒಳಮೀಸಲು ಜಾರಿಗೊಳಿಸಿ: ಹೋರಾಟ ಸಮಿತಿ ಆಗ್ರಹ

KannadaprabhaNewsNetwork |  
Published : Jan 21, 2026, 03:15 AM IST
ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಸುದ್ದಿಗೋಷ್ಠಿ  | Kannada Prabha

ಸಾರಾಂಶ

ಅವಿಭಜಿತ ದ.ಕ. ಜಿಲ್ಲೆಯ ಪರಿಶಿಷ್ಟ ಪಂಗಡ ಜಾತಿಗಳ ಪ್ರಮುಖರ ಸಭೆ ನಡೆಸಿದ ಬಳಿಕ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ

ಮಂಗಳೂರು: ಪರಿಶಿಷ್ಟ ಜಾತಿಗೆ ಮಾತ್ರವಲ್ಲ ಪರಿಶಿಷ್ಟ ಪಂಗಡಗಳಿಗೂ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವಿಭಜಿತ ದ.ಕ. ಜಿಲ್ಲಾ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಮಂಗಳೂರಿನ ಬಾಲಂಭಟ್‌ ಸಭಾಂಗಣದಲ್ಲಿ ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಪರಿಶಿಷ್ಟ ಪಂಗಡ ಜಾತಿಗಳ ಪ್ರಮುಖರ ಸಭೆ ನಡೆಸಿದ ಬಳಿಕ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ವಿಚಾರದಲ್ಲಿ 2024 ಆ.1 ರಂದು ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸಿಯೇ ಈ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂದು ಅವರು ಆರೋಪಿಸಿದರು.

1994ರಲ್ಲೇ ಕರ್ನಾಟಕ ಸರ್ಕಾರ ಒಬಿಸಿ ಮೀಸಲಾತಿಯಲ್ಲಿ ವರ್ಗೀಕರಣ ಜಾರಿ ಮಾಡಿತು. 2022ರಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್‌ಸಿ ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿತು. ಎಸ್‌ಸಿಗೆ ಶೇ. 14ರಿಂದ ಶೇ.17 ಹಾಗೂ ಎಸ್‌ಟಿಗೆ ಶೇ. 3ರಿಂದ ಶೇ. 7ರ ವರೆಗೆ ಏರಿಕೆ ಮಾಡಿತು. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನ್ಯಾ. ನಾಗಮೋಹನ ದಾಸ್‌ ಆಯೋಗದ ಶಿಫಾರಸನ್ನು ಪಡೆದು ಪ.ಜಾತಿಗಳ ನಡುವೆ ವರ್ಗೀಕರಣದ ಸೂತ್ರವನ್ನು ಜಾರಿ ಮಾಡಿದೆ. ಆದರೆ ಎಸ್‌ಸಿ ಜೊತೆಗೆ ಎಸ್‌ಟಿ ಮೀಸಲಾತಿಯನ್ನು ಕೈಬಿಟ್ಟಿದೆ ಎಂದರು. 42.48 ಲಕ್ಷ ಎಸ್‌ಟಿ ಜನಸಂಖ್ಯೆ:

ಕರ್ನಾಟಕದಲ್ಲಿ ಪ. ಪಂಗಡದಲ್ಲಿ ಒಟ್ಟು 50 ಜಾತಿಗಳಿವೆ. 2011ರ ಕೇಂದ್ರ ಸರ್ಕಾರದ ಜನಗಣತಿಯ ಪ್ರಕಾರ ಈ 50 ಜಾತಿಗಳ ಒಟ್ಟು ಜನಸಂಖ್ಯೆ 42.48 ಲಕ್ಷ. ಇದರಲ್ಲಿ ವಾಲ್ಮೀಕಿ ಸಮುದಾಯದವರು 32.96 ಲಕ್ಷದಷ್ಟಿದ್ದಾರೆ. ಉಳಿದ 49 ಜಾತಿಗಳಲ್ಲಿ 9.52 ಲಕ್ಷ ಜನಸಂಖ್ಯೆ ಇದೆ. ಆದಿಯನ್‌, ಬಾವ್ಚಾ, ಡುಂಗ್ರಿಗರಾಸಿಯಾ, ಚೆಂಚು, ಹಳಪಟ್ಟಿ, ಗೌಡ್ಲು, ಕಣಿಯನ್‌, ಮಲೆಕುಡಿಯ, ಮಲೇರು, ಪಣಿಯನ್‌ ಈ ಜಾತಿಗಳ ಜನಸಂಖ್ಯೆ 10 ಸಾವಿರವೂ ಇಲ್ಲ. ಕೆಲವು ಮೂರಂಕೆ ಜನಸಂಖ್ಯೆಯ ಜಾತಿಗಳೂ ಇವೆ. ಎಷ್ಟೋ ಜಾತಿಗಳಲ್ಲಿ ಸರ್ಕಾರಿ ನೌಕರಿ ಎಂಬುದು ಗಗನ ಕುಸುಮವೇ ಆಗಿದೆ. ಪ.ಪಂಗಡದಲ್ಲಿ ಪ್ರಬಲರಾಗಿರುವ ವಾಲ್ಮೀಕಿ ಸಮುದಾಯವೇ ಉಳಿದ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಾಗಿದೆ. ಪ.ಪಂಗಡಗಳ ನಡುವೆ ಒಳ ಮೀಸಲು ಹಂಚಿಕೆಯಾದರೆ ಸಣ್ಣ, ಅತೀ ಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.

ಮುಖಂಡರಾದ ಡಾ.ಸುಂದರ ನಾಯ್ಕ, ಕಾವೇರ, ಮುತ್ತಪ್ಪ, ಸುಂದರ ನಾಯ್ಕ, ಮುತ್ತಯ್ಯ, ವಕೀಲ ಪ್ರವೀಣ್‌ ಕುಮಾರ್‌ ಮತ್ತಿತರರಿದ್ದರು.

ಪ್ರತ್ಯೇಕ ಆಯೋಗ ರಚನೆ ಬೇಡಿಕೆ

ಸುಪ್ರೀಂ ಕೋರ್ಟ್‌ ಕೂಡ ತೀರ್ಪಿನಲ್ಲಿ ವರ್ಗೀಕರಣ ಮಾಡುವಾಗ ನಿಖರ ದತ್ತಾಂಶಗಳ ಸಂಗ್ರಹ, ಹಿಂದುಳಿದಿರುವಿಕೆಯ ಅಧ್ಯಯನ ಹಾಗೂ ಸಮಾನರು-ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರ ವಹಿಸುವಂತೆ ಸೂಚಿಸಿತ್ತು. ಹೀಗಾಗಿ ಈ ಅಂಶಗಳ ಆಧಾರದಲ್ಲಿ ಸರ್ಕಾರ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಪ್ರತ್ಯೇಕ ಆಯೋಗವನ್ನು ತಕ್ಷಣವೇ ರಚಿಸಬೇಕು. ಈ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತದೆ ಎಂದು ಶಾಂತಾರಾಮ ಸಿದ್ದಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ