ಕನ್ನಡಪ್ರಭ ವಾರ್ತೆ ಹಾಸನ
ವಲಯ-೮ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ನೃತ್ಯ ಸ್ಪರ್ಧೆಯಲ್ಲಿ ಸ್ಕಾಲರ್ಸ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರತಿಭಾವಂತ ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಬೆಳಗಿನ ಪ್ರಾರ್ಥನಾ ಸಮಾರಂಭದಲ್ಲಿ ವಿಜೇತರನ್ನು ಗೌರವಿಸಿದ ಸಂದರ್ಭದಲ್ಲಿ ಸಂಸ್ಥಾಪಕ ಡಾ. ಎಚ್.ಎನ್. ಚಂದ್ರಶೇಖರ್ ಅವರು, ನಮ್ಮ ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಶಾಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಎತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಾಲೆಯ ಗೌರವಾನ್ವಿತ ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್ ಮಾತನಾಡಿ, ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಬೆಂಬಲ ಹಾಗೂ ಶಿಕ್ಷಕರ ಮಾರ್ಗದರ್ಶನವೇ ಮೂಲಶಕ್ತಿ ಎಂದು ಶ್ಲಾಘಿಸಿದರು.ಉಪ ಪ್ರಾಂಶುಪಾಲರು ಆಂಟೋನಿ ಅವರು, ಇಂತಹ ಸಾಧನೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡಭಾವನೆ ಹಾಗೂ ಉನ್ನತ ಕನಸುಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ಶಿಕ್ಷಕಿ ಸಹನಾ ಅವರು, ವಿದ್ಯಾರ್ಥಿಗಳು ಕ್ರೀಡಾ ಹಾಗೂ ನೃತ್ಯದಲ್ಲಿ ತೋರಿದ ತಾಳ್ಮೆ ಮತ್ತು ಆತ್ಮವಿಶ್ವಾಸ ಶ್ಲಾಘನೀಯ ಎಂದರು. ಅದೇ ರೀತಿ, ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ, ಪ್ರತಿ ವಿದ್ಯಾರ್ಥಿಯ ಯಶಸ್ಸಿನಲ್ಲಿ ಪರಿಶ್ರಮದ ಜೊತೆಗೆ ಶಿಕ್ಷಕರ ಪ್ರೋತ್ಸಾಹ ಮತ್ತು ಪೋಷಕರ ಅಚಲ ಬೆಂಬಲವೂ ಪ್ರಮುಖ ಪಾತ್ರವಹಿಸಿದೆ ಎಂದು ಒತ್ತಿ ಹೇಳಿದರು.ಈ ವಿಜಯವು ಸ್ಕಾಲರ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಹಾಸನಗೆ ಅಪಾರ ಗೌರವ ತಂದಿದೆ.