ಕನ್ನಡಪ್ರಭ ವಾರ್ತೆ ಮಲ್ಕುಂಡಿ
ಉತ್ತಮ ಪ್ರಜೆಯಾಗಲು ಶಿಕ್ಷಣ ಬಹು ಮುಖ್ಯ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.ಸಮೀಪದ ಹುರ ಗ್ರಾಮದ ಶ್ರೀ ಗಾಯಿತ್ರಿ ವಿದ್ಯಾಸಂಸ್ಥೆ ಆವರಣದಲ್ಲಿ ಅಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಕಲಿಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಅಸ್ತಿಗಿಂತ ಮುಖ್ಯವಾಗಿ ಶಿಕ್ಷಣ ಕೊಡಿಸಿ ದೇಶದಲ್ಲಿ ಉತ್ತಮ ಪ್ರಜೆಯಾಗಲು ಸಹಕರಿಸಲು ಮುಂದಾಗಬೇಕಿದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳು ಪಠ್ಯದ ಜೊತೆಗೆ ಆಟೋಟ ಸ್ಪರ್ಧೆಯಲ್ಲೂ ಮುಂದಿರಬೇಕು. ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಇಂತಹ ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಪೋಷಕರ ಸಹಕಾರ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಪೋಷಕರು ಇದರ ಬಗ್ಗೆ ಗಮನ ಹರಿಸಿ ಮಕ್ಕಳ ಓದುವಿನ ಬಗ್ಗೆ ತಿಳಿದು ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆಯಿಂದ ದೂರವಿಟ್ಟು ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಸಹಕರಿಸಿದರೆ ತಮ್ಮ ಮಗು ದೇಶದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದನ್ನು ಬಿಟ್ಟು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು. ಶಿಕ್ಷಣ ಎಂಬುದು ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಠವಾದ ಸಂಪತ್ತು. ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡಿದಲ್ಲಿ ಅವರೇ ತಮ್ಮ ಎಲ್ಲಾ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ಅವರು ನೀಡಿದರು.
ಮಾದಪಟ್ಟಣ ವಿರಕ್ತ ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ, ಹಲ್ಲರೆ ಮಠಧ್ಯಾಕ್ಷ ಬಸವಣ್ಣ ಸ್ವಾಮೀಜಿ, ಮುಖಂಡರಾದ ಇಂಧನ ಬಾಬು ಮಹದೇವಪ್ಪ, ತರಗನಹಳ್ಳಿ ನಂಜುಂಡ ಸ್ವಾಮಿ, ಕೆ.ಬಿ. ಸ್ವಾಮಿ, ಗಿರೀಶ್, ಬಸವರಾಜ್, ಕೂಸಪ್ಪ, ಪ್ರತಿಧ್ವನಿ ತ್ರಿನೇಶ್, ಬಿಇಒ ಮಹೇಶ್, ಗಾಯಿತ್ರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಟರಾಜ್, ಮುಖ್ಯ ಶಿಕ್ಷಕ ಮಹದೇವಯ್ಯ ಮೊದಲಾದವರು ಇದ್ದರು.