- ಕಾಮಗಾರಿ ಆದೇಶವಿಲ್ಲದೇ ಶಿಥಿಲ ಕಟ್ಟಡ ತೆರವು ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ । ಸರ್ಕಾರ ಕಾಲೇಜು ಕಟ್ಟಡ ನಿರ್ಮಿಸಲು ಒತ್ತಾಯ
- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರುಪಟ್ಟಣದ ಪುರಸಭೆ ಎದುರು ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಿಥಿಲ ಕಟ್ಟಡ ತೆರವು ಕಾರ್ಯಾಚರಣೆ ಖಂಡಿಸಿ ಎಸ್ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಪುರಸಭೆ ಅಧಿಕಾರಿಗಳು ಜೆಸಿಬಿಯಿಂದ ಶಾಲೆ ಕಟ್ಟಡವನ್ನು ತೆರವುಗೊಳಿಸುತ್ತಿದ್ದರು. ಶಾಲೆಯ ಹೆಂಚುಗಳನ್ನು ತೆಗೆದು, ಗೋಡೆಗಳನ್ನು ಜೆಸಿಬಿ ಸಹಾಯದಿಂದ ನೆಲಸಮ ಮಾಡುತ್ತಿದ್ದರು. ಕಾಂಪೌಂಡ್ ಪಕ್ಕದಲ್ಲಿನ ಶೆಡ್ಗಳನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗಿತ್ತು. ಈ ವೇಳೆ ಹಳೇ ವಿದ್ಯಾರ್ಥಿಗಳು, ಸ್ಥಳೀಯರು ಕಾರ್ಯಾಚರಣೆಯನ್ನು ಖಂಡಿಸಿದರು.ಶಾಸಕ ಹರೀಶ್ ತರಾಟೆ:
ವಿಷಯ ತಿಳಿದು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎಸ್ಡಿಎಂಸಿ ನಿರ್ಣಯ ಪಡೆಯದೇ, ನಾಗರೀಕರ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಒಪ್ಪಿಗೆಯನ್ನೂ ಪಡೆಯದೇ ಕಟ್ಟಡ ಕೆಡವಿದ್ದೀರಿ. ಕಾಮಗಾರಿ ಆದೇಶವೂ ಸಹ ಇಲ್ಲ. ಪುರಸಭಾ ಸದಸ್ಯರಿಗೆ ಶಾಲೆ ಕಟ್ಟಡ ಕೆಡವುತ್ತಿರುವ ಮಾಹಿತಿ ನೀಡದೇ, ಕೇವಲ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶಾಲೆ ಕಟ್ಟಡ ತೆರವುಗೊಳಿಸಿರುವುದು ಖಂಡನೀಯ ಎಂದರು.ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಸರಿಯಲ್ಲ. ಶಾಲೆ ಪಕ್ಕದಲ್ಲೇ ಬಾರ್ ಸಹ ಇದೆ. ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂಥ ಘಟನೆಗಳಿಂದ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಸಕರಾದ ನಮ್ಮ ಗಮನಕ್ಕೂ ತಾರದೇ ಕಾಮಗಾರಿ ಆದೇಶವೂ ಇಲ್ಲದೇ ಶಾಲೆ ಕಟ್ಟಡ ತೆರವು ಕಾರ್ಯ ಕೈಗೊಂಡಿರುವುದು ಅಕ್ಷಮ್ಯ ಎಂದು ಬಿ.ಪಿ.ಹರೀಶ್ ಕಿಡಿಕಾರಿದರು.
ಸರ್ಕಾರಿ ಕಾಲೇಜು ಕಟ್ಟಡ ನಿರ್ಮಿಸಿ:ಇಂದಿರಾ ಕ್ಯಾಂಟೀನ್ ತೆರೆಯಲು ಶಾಲೆ ಕಟ್ಟಡ ಕೆಡವಿದ ವಿಷಯ ಹರಡುತ್ತಿದ್ದಂತೆ ಎಸ್ಡಿಎಂಸಿ ಪದಾಧಿಕಾರಿಗಳು, ನಾಗರಿಕರು, ಶಾಲೆಯ ಹಳೇ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದರು. ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆ ಸಮೀಪದಲ್ಲಿ ಮದ್ಯದ ಅಂಗಡಿಗಳಿವೆ. ಹೀಗಿರುವಾಗ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದಲ್ಲಿ ಮದ್ಯಪಾನಿಗಳು ಹೆಚ್ಚಾಗುತ್ತಾರೆ. ಅವರು ಕ್ಯಾಂಟೀನ್ಗೆ ಆಗಮಿಸಿದಾಗ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಾಲಾ ಕಟ್ಟಡಗಳು ಶೈಕ್ಷಣಿಕ ಉದ್ದೇಶಗಳಿಗೆ ಮೀಸಲಾಗಿರಲಿ. ಅದೇ ಕಟ್ಟಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸಬೇಕು. ಯಾರನ್ನೋ ಮೆಚ್ಚಿಸಲು ರುಚಿಯಿಲ್ಲದ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಶಾಲಾ ಕಟ್ಟಡವನ್ನೇ ತೆರವುಗೊಳಿಸುವ ಜಿಲ್ಲಾಧಿಕಾರಿ ವರ್ತನೆ ಖಂಡನೀಯ ಎಂದರು.
ಶಿಕ್ಷಣಪ್ರೇಮಿಗಳೂ, ಎಸ್ಡಿಎಂಸಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಈ ಸ್ಥಳದಲ್ಲಿ ಯಾವುದೇ ಕಾಮಗಾರಿ, ಕಾರ್ಯಾಚರಣೆ ನಡೆಸಬಾರದು. ಪ್ರಸ್ತುತ ಕೆಡವಿರುವ ಶಾಲೆಯ ಕಾಂಪೌಂಡ್ ಮತ್ತು ಕಟ್ಟಡವನ್ನು ಮರುನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಸುರೇಶ್ ಅವರನ್ನು ಆಗ್ರಹಿಸಿದರು.ಈ ಸಂದರ್ಭ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರದಿಯಂತೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಟ್ಟಡ ತೆರವುಗೊಳಿಸುತ್ತಿದ್ದೇವೆ. ಕಾಮಗಾರಿ ಆದೇಶದ ಫೈಲ್ ಗುಮಾಸ್ತರು ರಜಾ ಇರುವ ಕಾರಣ ಲಭ್ಯವಿಲ್ಲ ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಮುದೇಗೌಡರ ತಿಪ್ಪೇಶ್, ತಾಲೂಕು ಪುರಸಭಾ ಸದಸ್ಯ ಸಿದ್ದೇಶ್, ಎಸ್ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಎಸ್ಡಿಎಂಸಿ ಅಧ್ಯಕ್ಷ ಅಜ್ಜಾನಾಯ್ಕ, ಓ.ಜಿ. ಶಿವಕುಮಾರ್, ರಾಜಪ್ಪ, ದೇವರಾಜ್, ವಿಶ್ವನಾಥ್, ಮುಬಾರಕ್, ಹೊಸಳ್ಳಿ ಕರಿಬಸಪ್ಪ, ರೇವಣಸಿದ್ದೇಶ್ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದು, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.- - -
ಕೋಟ್ ಮಲೇಬೆನ್ನೂರಿನ ಪಶುವೈದ್ಯ ಶಾಲೆ, ನೀರಾವರಿ ಇಲಾಖೆ ಮತ್ತು ಬಸ್ ನಿಲ್ದಾಣದಲ್ಲಿ ಅಗತ್ಯ ನಿವೇಶನ ಇವೆ. ಹೀಗಿದ್ದೂ ಶಾಲೆ ಆವರಣದಲ್ಲಿಯೇ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಜರೂರತ್ತು ಏನಿದೆ? ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಸೂಕ್ತವಲ್ಲ- ಸುರೇಶ್ ಶಾಸ್ತ್ರಿ, ನಾಗರೀಕ
- - - -೨೨ಎಂಬಿಆರ್೧: ಮಲೇಬೆನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಜಿಬಿಎಂಎಸ್ ಶಾಲೆ ಕಟ್ಟಡವನ್ನು ತೆರವುಗೊಳಿಸಿರುವುದು.-ಚಿತ್ರ೨: ಕಟ್ಟಡ ತೆರವುಗೊಳಿಸಿದ ಸ್ಥಲವನ್ನು ಶಾಸಕ ಹರೀಶ್ ಪರಿಶೀಲಿಸಿದರು.
-ಚಿತ್ರ೩: ಶಾಲೆಯ ಹಳೇ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದರು.