ದೇವನಹಳ್ಳಿ: ಎಲ್ಲ ಮಕ್ಕಳಿಗೆ ತಮಗೆ ಜನ್ಮ ನೀಡಿದ ತಾಯಿ, ತವರು ಮನೆಯಾದರೆ, ಅದೇ ಮಕ್ಕಳಿಗೆ ಶಾಲೆ ಎರಡನೆ ಮನೆಯಾಗುತ್ತದೆ, ಶಿಕ್ಷಕಿಯರೇ ಅವರ ಎರಡನೇ ತಾಯಂದಿರು, ಅಲ್ಲದೆ ಮಕ್ಕಳಿಗೆ ತಾಯಿಯ ನಂತರ ಮಮತೆ ಹಾಗು ಮಾತೃ ವಾತ್ಸಲ್ಯ ನೀಡುವವರು ಶಿಕ್ಷಕಿಯರು ಮಾತ್ರ ಎಂದು ನಿವೃತ್ತ ಪ್ರಾಂಶುಪಾಲರು, ಕವಯತ್ರಿ ಎಂ.ಆರ್. ಕಮಲ ಹೇಳಿದರು.
ಅವರು ಯಾವ ಕ್ಷೇತ್ರದಲ್ಲಿ, ಯಾವ ವಿಷಯದಲ್ಲಿ ಆಸಕ್ತಿಯಿಂದ ಕಲಿಯಲು ಮುಂದಾಗುವರೋ ಅದೇ ಕ್ಷೇತ್ರದಲ್ಲಿ ಕಲಿಯಲು ಬಿಡಬೇಕು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು, ಸಂಸ್ಕಾರ, ಸುಸಂಸ್ಕೃತರನ್ನಾಗಿ ಮಾಡಲು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಉತ್ತಮ ಅಭಿರುಚಿಗಳನ್ನು ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಸಂಸ್ಥಾಪಕ ದಾಸಪ್ಪ ಮಾಸ್ಟರ್ ಮಾತನಾಡಿ, ನಮ್ಮ ಪತ್ನಿ ಅಕಾಲಿಕ ಮರಣ ಹೊಂದಿದ ಕಾರಣ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದುದು. ಅವರ ಬಗ್ಗೆ ಅಪಾರ ಗೌರವ ಇದೆ. ಏಕೆಂದರೆ ಶಿಕ್ಷಕನಿಗೆ ವಯಸ್ಸಾದ ಮೇಲೆ ಎದುರಿಗೆ ಸಿಗುವ ವಿದ್ಯಾರ್ಥಿಗಳನ್ನು ಗುರುತು ಹಿಡಿಯುವ ಮಹಾನ್ ನೆನಪಿನ ಶಕ್ತಿ ಇರುತ್ತದೆ. ಆ ವಿದ್ಯಾರ್ಥಿಗಳೇ ಸರ್/ಮೇಡಮ್ ನಾನು ನಿಮ್ಮ ವಿದ್ಯಾರ್ಥಿ ಎಂದು ಹೇಳಿಕೊಂಡಾಗ ಆ ಶಿಕ್ಷಕರಿಗಾಗುವ ಆನಂದ ಅಷ್ಟಿಷ್ಟಲ್ಲ. ಶಿಕ್ಷಕರಿಗೆ ಇಂತಹ ಶಿಷ್ಯರು ನೆನಪಿಸುವ ಅವಿಸ್ಮರಣೀಯ ಘಟನೆಗಳಿಂದ ಯಾವುದೂ ದೊಡ್ಡ ಪ್ರಶಸ್ತಿ ಅಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಪದ್ಮ ಶಾಲಾ ವರದಿ ಓದಿದರು. ಶಿಕ್ಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು. (ಫೋಟೊ ಕ್ಯಾಫ್ಷನ್)ದೇವನಹಳ್ಳಿಯ ಪ್ರೇಮ ಎಜುಕೇಷನ್ ಟ್ರಸ್ಟ್ನ ಜ್ಞಾನ ಗಂಗೋತ್ರಿ ಶಾಲೆಯ 15ನೇ ವಾರ್ಷಿಕೋತ್ಸವ ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲರು, ಕವಯತ್ರಿ ಎಂ.ಆರ್. ಕಮಲ ಉದ್ಘಾಟಿಸಿದರು. ಶಾಲಾ ಸಂಸ್ಥಾಪಕ ದಾಸಪ್ಪ ಮಾಸ್ಟರ್, ಶಿಕ್ಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.