ಕನ್ನಡಪ್ರಭ ವಾರ್ತೆ ಕಾಪು
ಕಟಪಾಡಿಯ ಸನ್ಮ್ಯಾಟ್ರಿಕ್ಸ್ ಬ್ಯಾನರ್ನಡಿ ನಿರ್ಮಾಣಗೊಳ್ಳುತ್ತಿರುವ ‘ಸ್ಕೂಲ್ ಲೀಡರ್’ ಚಲನಚಿತ್ರ ತಂಡದ ಕಲಾವಿದರ ಸಮ್ಮಿಲನ ಮತ್ತು ಅಭಿನಂದನಾ ಕಾರ್ಯಕ್ರಮ ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.ಚಿತ್ರದ ನಿರ್ಮಾಪಕರಾದ ಉದ್ಯಮಿ ಕೆ.ಸತ್ಯೇಂದ್ರ ಪೈ ಕಟಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಸ್ಕೂಲ್ ಲೀಡರ್ ಮಕ್ಕಳ ಚಿತ್ರವನ್ನು ನಿರ್ಮಿಸಲಾಗಿದ್ದು, ಈ ಚಿತ್ರದ ಯಶಸ್ವಿಗೆ ಸಹಕರಿಸಬೇಕು ಎಂದರು.ಬಳಿಕ ಚಿತ್ರದಲ್ಲಿ ಅಭಿನಯಿಸಿರುವ ೧೦೦ಕ್ಕೂ ಅಧಿಕ ಬಾಲ ಕಲಾವಿದರಿಗೆ, ತಂತ್ರಜ್ಞರಿಗೆ ಗೌರವಾರ್ಪಣೆ ನಡೆಯಿತು. ಇದೇ ವೇಳೆ ಕರ್ನಾಟಕ ಸರ್ಕಾರದಿಂದ ‘ಪೆನ್ಸಿಲ್ ಬಾಕ್ಸ್’ ಚಿತ್ರದ ಸಾಹಿತ್ಯಕ್ಕಾಗಿ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ರಜಾಕ್ ಪುತ್ತೂರು ಅವರನ್ನು ಗೌರವಿಸಲಾಯಿತು.ಕಾಂತಾರ ಸಿನೆಮಾ ಖ್ಯಾತಿಯ ಭಾಸ್ಕರ್ ಮಣಿಪಾಲ್, ಚಿತ್ರನಟಿ ರಂಜಿತಾ ಶೇಟ್, ಸಹನಿರ್ದೇಶಕರಾದ ಅಕ್ಷತ್ ವಿಟ್ಲ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಜಗನ್ನಾಥ ಕೋಟೆ, ಮಧುಸೂಧನ್ ಖುಶೆ ಕಾಲೇಜಿನ ಪ್ರಾಂಶುಪಾಲ ಬಿಂದುಸಾರ ಶೆಟ್ಟಿ ಶುಭ ಹಾರೈಸಿದರು.ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ಶೆಟ್ಟಿ, ರೋಟರಿ ಪೂರ್ವಾಧ್ಯಕ್ಷೆ ತುಳಸಿ ದೇವಾಡಿಗ, ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಎಸ್.ವಿ.ಕೆ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರ ನಾಯಕ್, ಛಾಯಾಗ್ರಾಹಕ ಮೋಹನ್ ಪಡ್ರೆ, ಸಂಗೀತ ನಿರ್ದೇಶಕ ಜಯಕಾರ್ತಿ, ಪೆನ್ಸಿಲ್ಬಾಕ್ಸ್ ಚಿತ್ರ ನಿರ್ಮಾಪಕ ದಯಾನಂದ ರೈ ಬೆಟ್ಟಂಪಳ್ಳಿ, ಗಾಯಕಿ ಕ್ಷಿತಿ ಕೆ. ರೈ ಧರ್ಮಸ್ಥಳ, ಚಿತ್ರದ ಕಲಾವಿದರಾದ ದೀಕ್ಷಾ ಡಿ.ರೈ, ಶ್ರೀಜಯ್, ಯಶಸ್ ಪಿ. ಸುವರ್ಣ ಕಟಪಾಡಿ, ಲೋಕೇಶ್ ಸಂಪಿಗೆ ಮತ್ತಿತರರು ಉಪಸ್ಥಿತರಿದ್ದರು. ಸ್ಕೂಲ್ ಲೀಡರ್ ಚಿತ್ರದ ನಿರ್ದೇಶಕ ರಜಾಕ್ ಪುತ್ತೂರು ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಮೂರು ಮುತ್ತು ಕಲಾವಿದ ನಾಗೇಶ್ ಕಾಮತ್ ಕಟಪಾಡಿ ವಂದಿಸಿದರು.