ಗದಗ: ಮಕ್ಕಳ ಭವಿಷ್ಯದ ನಿರ್ಮಾಣದಲ್ಲಿ ತಾಯಿಯ ಪಾತ್ರ ಮಹತ್ವದ್ದು ಆಗಿದೆ. ನಾಡಸೇವೆ, ದೇಶಸೇವೆ ಹಾಗೂ ಸಂಕಷ್ಟಗಳನ್ನು ಎದುರಿಸುವ ಶಕ್ತಿ ತುಂಬುವ ಕೆಲಸವನ್ನು ತಾಯಂದಿರು ಮಾಡಬೇಕೆಂದು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಹೇಳಿದರು.
ಮಕ್ಕಳು ಶಾಲೆಯಲ್ಲಿ ಔಪಚಾರಿಕವಾಗಿ ಮತ್ತು ಮನೆಯಲ್ಲಿ ಅನೌಪಚಾರಿಕವಾಗಿ ಶಿಕ್ಷಣ ಪಡೆಯುತ್ತಾರೆ. ಶಾಲೆಯಲ್ಲಿ ಶಿಕ್ಷಕರ ಭಯ ಇರುವುದರಿಂದ ಮಕ್ಕಳು ಶಿಕ್ಷಕರು ಹೇಳಿದಂತೆ ಕೇಳುತ್ತಾರೆ. ಅದೇ ರೀತಿ ಮನೆಯಲ್ಲಿಯೂ ಸಹ ಅವರ ಶಿಕ್ಷಣ, ಕಾರ್ಯ ಚಟುವಟಿಕೆಗಳ ಬಗ್ಗೆ ಪಾಲಕರು ಹೆಚ್ಚು ಗಮನಿಸುತ್ತಿರಬೇಕು, ಇಲ್ಲದಿದ್ದರೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚುರುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಮಾತನಾಡಿ, ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಮಕ್ಕಳ ಹಬ್ಬ ಸಂತಸ ತಂದಿದೆ. ಒಂದು ಸಂಸ್ಥೆ ಕಟ್ಟುವುದು ಸುಲಭ ಅಲ್ಲ ಮಕ್ಕಳಿಗೆ ಬರಿ ಶಿಕ್ಷಣ ನೀಡದೆ ಅವರಿಗೆ ನೈತಿಕ, ಸಾಮಾಜಿಕ, ದೇಶಭಕ್ತಿ ಮತ್ತು ಸಂಸ್ಕಾರವನ್ನು ನೀಡಿದರೆ ಮಕ್ಕಳು ಸಮಾಜಕ್ಕೆ ಮಾದರಿಯಾಗುತ್ತಾರೆ. ಭವ್ಯ ಭಾರತದ ಭವಿಷ್ಯದ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.
ಈ ವೇಳೆ ಸಂಪನ್ಮೂಲ ವ್ಯಕ್ತಿ ಎಂ.ಎಸ್. ಪೂಜಾರ ಮಾತನಾಡಿದರು.ಬಿಇಒ ಆರ್.ಎಸ್. ಬುರುಡಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಎಂ.ಎಸ್. ಪೂಜಾರ, ವಾರ್ತಾ ಇಲಾಖೆಯ ವಿಜಯಕುಮಾರ ಬೆಟಗೇರಿ, ಶಿಕ್ಷಣ ಇಲಾಖೆಯ ಗಂಗಾಧರ ಕವಳಿಕಾಯಿ, ಅಮರೇಶ ನೆಗಳೂರ, ಕವಿತಾ ದಂಡಿನ, ಜೆ.ಎಸ್. ಜೇವರ್ಗಿ, ಪ್ರಕಾಶ ಮಂಗಳೂರು, ವಿನೋದ ದಾಸರಿ, ನಾಗಸಮುದ್ರದ ಪಾರಂಪರಿಕ ವೈದ್ಯ ಎಸ್.ಜಿ. ಹಳ್ಳಿಕೆರಿ ಅವರನ್ನು ಸನ್ಮಾನಿಸಲಾಯಿತು.