ಕನಕಗಿರಿ: ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತವೆ ಎಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ (ಪ್ರೌಢ ಶಾಲಾ ವಿಭಾಗ) ಮುಖ್ಯೋಪಾಧ್ಯಾಯ ಜಗದೀಶ ಹಾದಿಮನಿ ಹೇಳಿದರು.
ಹಿಂದಿನ ಕಾಲದಲ್ಲಿ ಮಠ,ಮಂದಿರಗಳ ನಿರ್ಮಾಣದಲ್ಲಿ ಮಾತ್ರವಲ್ಲ ವಿವಿಧ ಕ್ಷೇತ್ರಗಳಲ್ಲಿಯೂ ವಿಜ್ಞಾನ ಅಡಗಿದೆ. ಮನುಷ್ಯನ ಬದುಕಿನ ಪ್ರತಿ ಹಂತದಲ್ಲಿಯೂ ವಿಜ್ಞಾನದ ಅಗತ್ಯವಿದೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಅಭಿವೃದ್ಧಿಗೂ ವಿಜ್ಞಾನ ಪೂರಕವಾಗಿದೆ ಎಂದರು.
ನಂತರ ಅಗಸ್ತ್ಯ ಫೌಂಡೇಶನ್ ಮಾರ್ಗದರ್ಶಿ ಶಿಕ್ಷಕ ಹನುಮಂತಪ್ಪ ಬಳ್ಳಾರಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಂಡಿರುವುದು ಖುಷಿ ತಂದಿದೆ. ನಮ್ಮ ಸಂಸ್ಥೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.ಓಜೋನ್ ಪದರ ರಕ್ಷಣೆ ಮಾಡುವುದು, ಪ್ಲೆಮಿಂಗ್ ಎಡಗೈ-ಬಲಗೈ ನಿಯಮಗಳು ಹಾಗೂ ಚಂದ್ರಯಾನ-3, ಮಂಗನಿಂದ ಮಾನವ ಮಾದರಿ ಪ್ರಯೋಗ ಗಮನ ಸೆಳದವು. ಸಾವಿರಕ್ಕೂ ಅಧಿಕ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪ್ರಭು ವಸ್ತ್ರದ, ಸುಮಾ,ತಿಪ್ಪಮ್ಮ, ಸಲ್ಮಾ ಜಹಾನ್, ಮಂಜುಳಾ ಮೇಟಿ, ವಿಜಯೇಂದ್ರ, ಮೌನೇಶ ಬಡಿಗೇರ, ಸೈಪುಲ್ಲಾ, ರಾಜೇಶ, ನಾಗರಾಜ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.