ಬ್ಯಾಡಗಿ: ಶಿಲ್ಪಕಲೆ ಹಾಗೂ ಚಿತ್ರಕಲೆಗಳು ಅದ್ಭುತ ಮಾಹಿತಿ ಕಣಜವಾಗಿದ್ದು, ಸಾವಿರ ಪದಗಳ ಅರ್ಥವನ್ನು ಹೊರಹಾಕುವ ಶಕ್ತಿ ಒಂದು ಚಿತ್ರಕ್ಕಿದೆ ಎಂದು ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀ ಅಭಿಪ್ರಾಯಪಟ್ಟರು.ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಾ ಬ್ಯಾಡಗಿ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರಿಗೂ ಬಹುಮಾನ ಬರಲಿಕ್ಕಿಲ್ಲ. ಆದರೆ ಚಿತ್ರ ಬರೆದ ತೃಪ್ತಿ ಎಲ್ಲ ಮಕ್ಕಳು ಹಾಗೂ ಪಾಲಕರಿಗೆ ಸಿಗಲಿದೆ. ಸಮಾಜ ಸೇವಾ ಟ್ರಸ್ಟ್ ಸಾಮಾಜಿಕ ಕಾರ್ಯಕ್ರಮ ಹಾಕಿಕೊಂಡಿದ್ದು, ಜನಮನ ಭಾವನೆಗಳಿಗೆ ತಕ್ಕದಾದ ಜನಪರ ನಿಲುವು ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮುಂದುವರಿಸುವಂಥ ಕೆಲಸವಾಗಬೇಕಾಗಿದೆ ಎಂದರು.ರಾಜಶೇಖರ ಹಾಲೇವಾಡಿಮಠ ಮಾತನಾಡಿ, ಚಿತ್ರಕಲೆ ಮಕ್ಕಳಲ್ಲಿ ಕಲ್ಪನಾಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಿಗೆ ನಮ್ಮ ರಕ್ಷಕರು, ನಮ್ಮ ಸಂಸ್ಕೃತಿ ಎನ್ನುವ ಎರಡು ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಬೇಕಾಗಿದ್ದು, ಇದರಿಂದ ಮಕ್ಕಳಲ್ಲಿ ದೇಶಭಕ್ತಿ ಮೂಡುವುದರ ಜತೆಗೆ ಗಡಿ ಕಾಯುವ ಸೈನಿಕರು, ಅಲ್ಲಿನ ವಾತಾವರಣ ಕುರಿತು ಮಕ್ಕಳಿಗೆ ಕಲ್ಪನೆ ಮೂಡಲಿದೆ ಎಂದರು.ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾನತಾಡಿ, ಪಾಲಕರು ಮಕ್ಕಳ ವಿವಿಧ ಕಲೆ, ಕೌಶಲ್ಯ, ಪ್ರತಿಭೆಗಳನ್ನು ಗುರುತಿಸುವ ಮೂಲಕ ಪ್ರೋತ್ಸಾಹಿಸಬೇಕಿದೆ. ಸಂಸ್ಕೃತಿ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಭಿನ್ನ ಸಂಸ್ಕೃತಿ, ಆಚಾರ ವಿಚಾರಗಳು, ನೈಜ ಜೀವನದ ಹಲವು ದೃಶ್ಯಗಳನ್ನು ಮಕ್ಕಳು ತಮ್ಮ ಸ್ಮೃತಿ ಪಟಲದಲ್ಲಿ ಮೂಡಿಸಿಕೊಂಡು ಚಿತ್ರದಲ್ಲಿ ಬಿಡಿಸುವುದು ಸುಲಭದ ಮಾತಲ್ಲ. ಇಂತಹ ಅದ್ಭುತ ಕಲೆಯಲ್ಲಿ ತೊಡಗಿಸುವ ಮೂಲಕ ಉತ್ತಮ ಹವ್ಯಾಸ ರೂಢಿಸಬೇಕಿದೆ ಎಂದರು.ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಶೇಖರ ಕರೇಗೌಡ್ರ, ಉಪಾಧ್ಯಕ್ಷ ಗಿರೀಶ ಇಂಡಿಮಠ, ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟೀಲ, ಪದಾಧಿಕಾರಿಗಳಾದ ಮಂಜುನಾಥ ಉಪ್ಪಾರ, ಸಿದ್ದಲಿಂಗಯ್ಯ ಬೂದಿಹಾಳಮಠ, ವಿಶ್ವನಾಥ ಅಂಕಲಕೋಟಿ, ಪರಶುರಾಮ ಮೇಲಗಿರಿ, ಬಸವರಾಜ ಸುಂಕಾಪುರ, ಕಿರಣ ವರ್ಣೇಕರ, ವಿಶ್ವನಾಥ ಸೊರಟೂರು, ಆನಂದ ಸೊರಟೂರು, ಮಾಲತೇಶ ಕಂಬಳಿ, ಇನ್ನರವೀಲ ಅಧ್ಯಕ್ಷೆ ಪ್ರತಿಭಾ ಮೇಲಗಿರಿ, ಸದಸ್ಯರಾದ ಕವಿತಾ ಸೊಪ್ಪಿನಮಠ, ಪುಷ್ಟಾ ಇಂಡಿಮಠ ಇತರರಿದ್ದರು. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಗಾಂಧಾರಿ ವಿದ್ಯೆ:
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪಟ್ಟಣದ ಭೂಮಿಕಾ ಹಾಗೂ ವಿಶ್ವನಾಥ ಕಲ್ಲಾಪುರ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅದ್ಭುತವಾಗಿ ಚಿತ್ರ ಬಿಡಿಸುವ ಮೂಲಕ ಗಾಂಧಾರಿ ವಿದ್ಯೆಯನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು.