- ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ತಡೆಯಲು ಸೇಡಿನ ರಾಜಕೀಯ
ಬೆಳಗಾವಿಯಲ್ಲಿ ಎಸ್ಡಿಎ ಆತ್ಮಹತ್ಯೆ, ಬೀದರನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಸೇರಿದಂತೆ ರಾಜ್ಯದಲ್ಲಿ ದಿನದಿನಕ್ಕೂ ಅರಾಜಕತೆ ಸೃಷ್ಟಿಯಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಮುಖವಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು.
ನಗರದ ಬಂಟರ ಭವನದಲ್ಲಿ ಎಸ್ಎಸ್ಕೆ ಸಮಾಜದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ಪ್ರಚೋದನೆ, ಹೆಚ್ಚಿನ ರೀತಿಯ ಒತ್ತಡವನ್ನು ತಾಳಲಾಗದೇ, ಒಬ್ಬ ಎಸ್ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆದಿದೆ. ಆದರೆ, ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಲಿಲ್ಲ. ಆದರೂ, ಆತ್ಮಹತ್ಯೆಗೆ ಕಾರಣರಾದವರು ಬೇಲ್ ತಂದು, ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ದೂರಿದರು.
ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ಎಲ್ಲ ಕಡೆಯಲ್ಲೂ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಅತ್ತ ಬೀದರ ಜಿಲ್ಲೆಯಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ ಡೆತ್ ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಒತ್ತಡದಿಂದಲೇ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವಾರು ಶಾಸಕರಿಂದಲೂ ತನಗೆ ಬೆದರಿಕೆಯಿದೆ ಎಂದು ಮೃತ ಗುತ್ತಿಗೆದಾರರ ಡೆತ್ ನೋಟ್ ಬರೆದು, ಸಾವಿಗೆ ಶರಣರಾಗಿದ್ದಾನೆ.
ಆದರೂ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಬಿಜೆಪಿಯಿಂದ ಈ ಬಗ್ಗೆ ಹೋರಾಟ ನಡೆದು, ನ್ಯಾಯಾಲಯದ ಮೆಟ್ಟಿಲೇರಿದ ನಂತರವಷ್ಟೇ ಕೋರ್ಟ್ ನಿರ್ದೇಶನವಾದ ನಂತರವಷ್ಟೇ ಎಫ್ಐಆರ್ ದಾಖಲು ಮಾಡುತ್ತಾರೆ. ನಿತ್ಯವೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಮುಡಾ ಸೈಟ್ ಹಗರಣ ಹೊರಬಂದ ನಂತರ, ಮಹರ್ಷಿ ವಾಲ್ಮೀಕಿ ನಿಗಮದ ನೂರಾರು ಕೋಟಿ ಹಗರಣ ಬಯಲಿಗೆ ಬಂದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತಹ ಪ್ರಸಂಗ ಸೃಷ್ಟಿಯಾಗಿದೆ. ಅದನ್ನೆಲ್ಲಾ ಡೈವರ್ಟ್ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಶೆಟ್ಟರ್ ಆರೋಪಿಸಿದರು.
ಬಿಜೆಪಿ ನಾಯಕತ್ವ ಗುರಿಯಾಗಿಸಿಕೊಂಡು, ಕೇಸ್ ಮಾಡುವುದು, ಎಸ್ಐಟಿ ರಚಿಸುವುದು, ನ್ಯಾಯಾಂಗ ತನಿಖೆ ನಡೆಯುತ್ತಿರುವಾಗಲೇ ಮಧ್ಯಂತರ ವರದಿ ಆಧಾರದಲ್ಲಿ ಎಫ್ಐಆರ್ ದಾಖಲಿಸುವುದನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಬಹುಶಃ ನನ್ನ ರಾಜಕೀಯ ಜೀವನದಲ್ಲೇ ಇಂತಹ ಸೇಡಿನ ರಾಜಕಾರಣವನ್ನು ಎಂದೂ ನೋಡಿರಲಿಲ್ಲ ಎಂದು ಕಿಡಿಕಾರಿದರು.- - - ಕೋಟ್ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳು ಆದಷ್ಟು ಬೇಗನೆ ಬಗೆಹರಿಯಲಿವೆ. ರಾಜಕೀಯ ಪಕ್ಷವೆಂದ ಮೇಲೆ ಎಲ್ಲ ಸಮಸ್ಯೆಗೂ ಇತ್ಯರ್ಥ ಅನ್ನುವುದು ಇದ್ದೇ ಇರುತ್ತದೆ. ಪಕ್ಷದ ಹೈಕಮಾಂಡ್ ಸರಿಯಾದ ಸಮಯಕ್ಕೆ, ಸೂಕ್ತ ನಿರ್ಧಾರ ಕೈಗೊಂಡು, ಸಮಾಧಾನಕರ ರೀತಿ ಎಲ್ಲವನ್ನೂ ಸರಿಪಡಿಸುತ್ತದೆಂಬ ವಿಶ್ವಾಸವೂ ಇದೆ
- ಜಗದೀಶ ಶೆಟ್ಟರ್, ಸಂಸದ, ಬೆಳಗಾವಿ ಕ್ಷೇತ್ರ- - - -(ಫೋಟೋ:) ಜಗದೀಶ ಶೆಟ್ಟರ್