ಮದ್ದೂರು: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ಎಸ್ ಡಿಪಿಐ ವಿರುದ್ಧ ನಡೆಯುತ್ತಿರುವ ಇಡಿ ದಾಳಿ ಖಂಡಿಸಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಬಿಜೆಪಿ ನೇತೃತ್ವದ ಸರ್ಕಾರ ತನ್ನ ಅಧಿಕಾರದ ಪ್ರಾರಂಭದಿಂದಲೇ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದೆ. ವಕ್ಫ್ ತಿದ್ದುಪಡಿ ಮಸೂದೆಯಂತಹ ದುಷ್ಟ ತಂತ್ರಗಳ ಮೂಲಕ ವಕ್ಫ್ ಆಸ್ತಿಗಳನ್ನು ಕಬಳಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
ಕರಾಳ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಧ್ವನಿಯೆತ್ತಿರುವ ಎಸ್ ಡಿಪಿಐ ವಿರುದ್ಧ ಕೇಂದ್ರ ಸರ್ಕಾರ ತನಿಖಾ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡು ಪಕ್ಷದ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಅಲ್ಲದೆ ಎಸ್ಡಿಪಿಐ ನ ರಾಷ್ಟ್ರೀಯ ಅಧ್ಯಕ್ಷರನ್ನು ಸುಳ್ಳು ಪ್ರಕರಣದ ಮೂಲಕ ಬಂಧಿಸಿದೆ ಎಂದು ಎಸ್ಡಿಪಿಐನ ಅಧ್ಯಕ್ಷ ತನ್ವೀರ್, ಕಾರ್ಯದರ್ಶಿ ಮುಜಾಮೀರ್ ಖಂಡಿಸಿದರು.ಕೇಂದ್ರ ಸರ್ಕಾರದ ಮುಸ್ಲಿಂ ವಿರೋಧಿ ಷಡ್ಯಂತ್ರಗಳನ್ನು ಸೋಲಿಸುವುದಕ್ಕೆ ದೇಶದ ನಾಗರಿಕರು ಕೈಜೋಡಿಸಬೇಕು. ರಾಜಕೀಯ ಪಕ್ಷಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಕೇಂದ್ರದ ಈ ಕರಾಳ ಕಾನೂನುಗಳನ್ನು ವಿರೋಧಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.