ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರು ಹಾಗೂ ಬೆಂಬಲಿಗರ ಎರಡು ದಿನಗಳ ಸಭೆ ಶನಿವಾರ ಸಂಜೆಯಿಂದ ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ನಲ್ಲಿ ಶುರುವಾಗಿದೆ.
ವಿಜಯೇಂದ್ರ ಅವರ ಕೈ ಬಲಪಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ದೊಡ್ಡಮಟ್ಟದಲ್ಲಿ ಸಮಾವೇಶ ಆಯೋಜಿಸುವ ಬಗ್ಗೆ, ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಉಚ್ಚಾಟಿಸುವಂತೆ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸುವುದೂ ಸೇರಿ ಅನೇಕ ವಿಷಯಗಳ ಬಗ್ಗೆ ರಹಸ್ಯ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಜಯೇಂದ್ರ ಅವರಿಗೆ ಬಲ ನೀಡಲು ಸಭೆ ನಡೆಸಿದ್ದೇವೆ. ಈಗಾಗಲೇ ನಾವು ಆರು ಸಭೆಗಳನ್ನು ನಡೆಸಿದ್ದು, ದಾವಣಗೆರೆಯಲ್ಲಿ ಇದೀಗ 7ನೇ ಸಭೆ ನಡೆಸುತ್ತಿದ್ದೇವೆ. ಎರಡು ದಿನಗಳ ಸಭೆಯಲ್ಲಿ 40ಕ್ಕೂ ಹೆಚ್ಚು ಮುಖಂಡರು ಭಾಗವಹಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಸದೃಢವಾಗಬೇಕೆಂಬ ಸದುದ್ದೇಶದಿಂದ ಸಭೆ ನಡೆಸಿದ್ದೇವೆ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದೀಗ ಒಂದು ವರ್ಷವಾಗುತ್ತಿದೆ. ಅವರ ನೇತೃತ್ವದಲ್ಲಿ 17 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂದು ತಿಳಿಸಿದರು.
ಭಾನುವಾರ ಬೆಳಗ್ಗೆ ದಾವಣಗೆರೆಯ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ದರ್ಶನ ಪಡೆಯುತ್ತೇವೆ. ನಂತರ, ಬೆಳಗ್ಗೆ 11ಕ್ಕೆ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ನಲ್ಲೇ ಮತ್ತೆ ಸಭೆ ನಡೆಸುತ್ತೇವೆ. ಭಾನುವಾರದ ಸಭೆಯ ನಂತರ ನಮ್ಮ ನಿರ್ಣಯ ತಿಳಿಸುತ್ತೇವೆ ಎಂದು ಹೇಳಿದರು.
ಪಕ್ಷದ ಮುಖಂಡರಾದ ವೈ.ಸಂಪಂಗಿ, ಬ್ಯಾಡಗಿ ವಿರೂಪಾಕ್ಷಪ್ಪ, ರಾಣೆಬೆನ್ನೂರಿನ ಅರುಣಕುಮಾರ ಪೂಜಾರ, ಕೊಳ್ಳೆಗಾಲದ ಮಹೇಶ, ಮಾನ್ವಿಯ ಗಂಗಾಧರ ನಾಯ್ಕ, ಶಿವಮೊಗ್ಗದ ಕುಮಾರಸ್ವಾಮಿ, ಸೀಮಾ ಮಸೂತಿ, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ, ರಾಜಶೇಖರ ಶೀಲವಂತ, ಮಸ್ಕಿ ಪ್ರತಾಪ ಗೌಡ ಸೇರಿದಂತೆ ಅನೇಕ ಜಿಲ್ಲೆಗಳಿಂದ ಮುಖಂಡರು ಆಗಮಿಸಿದ್ದು, ಭಾನುವಾರ ಮತ್ತಷ್ಟು ಮುಖಂಡರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತಮ್ಮ ದುರಾಡಳಿತ ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕೋವಿಡ್ ವಿಚಾರ ತೆಗೆದು, ದ್ವೇಷದ ರಾಜಕಾರಣ ಮಾಡಲು ಹೊರಟಿದೆ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.