ಯಲಬುರ್ಗಾ:
ಜೀವನದಲ್ಲಿ ಅಡೆ-ತಡೆ ಬಂದರೂ ಆತ್ಮಸ್ಥೈರ್ಯದಿಂದ ಮುನ್ನುಗ್ಗುವ ಮನೋಬಲ ಅಳವಡಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರ ಶಂಕರ ತೋಳಮಟ್ಟಿ ಹೇಳಿದರು.ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಅನೇಕ ರೀತಿಯಲ್ಲಿ ಅವಕಾಶಗಳು ಒದಗಿ ಬರುತ್ತೇವೆ. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಬದುಕನ್ನು ಉತ್ತಮ ರೀತಿಯಿಂದ ಕಟ್ಟಿಕೊಳ್ಳುಬಹುದು ಎಂದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಆಗಾಧ ಸಾಧನೆ ಮಾಡುವ ಮೂಲಕ ಪುರುಷರ ಸರಿ-ಸಮಾನ ರೀತಿಯಲ್ಲಿ ಮುಂಚೂಣಿಯಲ್ಲಿದ್ದಾಳೆ. ಇಡೀ ಕುಟುಂಬ ನಿರ್ವಹಣೆ ಜತೆಗೆ ಅತೀ ಹೆಚ್ಚು ಸ್ಥಾನಮಾನ ಗಳಿಸಿದ್ದಾಳೆ ಎಂದು ಹೇಳಿದರು.ವಸತಿ ಶಾಲೆಗಳ ಸಮನ್ವಯ ಅಧಿಕಾರಿ, ಬಳೂಟಗಿ ವಸತಿ ಶಾಲೆಯ ಪ್ರಾಚಾರ್ಯ ಜ್ಯೋತಿಶ್ವರ ಬೇಸ್ತರ ಮಾತನಾಡಿ, ಮಹಿಳೆಯನ್ನು ಕೇವಲ ಮಾ.೮ರಂದು ಮಾತ್ರ ಪೂಜ್ಯ ಭಾವನೆಯಿಂದ ಕಂಡರೆ ಸಾಲದು. ನಿತ್ಯ ಆಕೆಯನ್ನು ಸಹೋದರಿಯಂತೆ ಕಾಣುವ ಮನೋಭಾವನೆ ಮೂಡಿಬೇಕು. ಅಂದಾಗ ಇಂತಹ ಮಹಿಳಾ ದಿನಾಚರಣೆಗೆ ಹೆಚ್ಚು ಅರ್ಥ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವ್ಹಿ.ಬಿ. ಹನುಮಶೆಟ್ಟಿ, ಮಹಿಳೆ ಸಾಕಷ್ಟು ಕಷ್ಟ, ಕಾರ್ಪಣ್ಯ ಸಹಿಸಿಕೊಂಡು ತ್ಯಾಗಮಯ ಜೀವನ ನಡೆಸುತ್ತಾರೆ. ಆದರೆ, ಹೆಣ್ಣು ಮಗು ಹುಟ್ಟಿದರೆ ಬೇಡ ಎನ್ನುವ ಈ ಸಮಾಜದ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದರು.ಈ ವೇಳೆ ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರ ಶಂಕರ ತೋಳಮಟ್ಟಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಮೋನಿಕಾ, ಪ್ರಜ್ಞಾ, ರಕ್ಷಿತಾ, ಭೂಮಿಕಾ ಮತ್ತಿತರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಸಂಗನಗೌಡ ಪಾಟೀಲ, ಎಂ. ಶ್ರೀಕಾಂತ, ದ್ಯಾಮಪ್ಪ ರಾಜೂರ, ಮಂಜುಳಾ ನರೇಂದ್ರ, ಶಿವಲೀಲಾ ಜಕ್ಕಲಿ, ಕಳಕೇಶ ಅರಕೇರಿ, ಶಾಮತವೀರಯ್ಯ ಬಲವಂಜಿಮಠ, ರವೀಂದ್ರ ಮಾಳೆಕೊಪ್ಪ, ರಾಜೇಶ್ವರಿ ಬಿರಾದಾರ, ಫಾತೀಮಾ ಬೆಟಗೇರಿ, ಮಲ್ಲಿಕಾರ್ಜುನ ಅಂಗಡಿ, ಶಂಕರ ಇಂಗಳದಾಳ, ಅಶ್ವಿನಿ ಇದ್ದರು.