ವ್ಯಾಪಾರಿ ಸಂಘದಿಂದ ಸ್ವಯಂಘೋಷಿತ ಸಂಕೇಶ್ವರ ಬಂದ್‌

KannadaprabhaNewsNetwork | Published : Jul 11, 2024 1:32 AM

ಕನ್ನಡಪ್ರಭ ವಾರ್ತೆ ಸಂಕೇಶ್ವರಸ್ಥಳೀಯ ವ್ಯಾಪಾರ ಮಳಿಗೆಯ ಮಾಲೀಕರು ಅನ್ಯ ರಾಜ್ಯದವರಿಗೆ ವ್ಯಾಪಾರ ಪ್ರಾರಂಭಿಸಲು ಮಳಿಗೆಗಳನ್ನು ಬಾಡಿಗೆ ನೀಡುವುದು ಸರಿಯಲ್ಲ. ಪರ ರಾಜ್ಯದ ವ್ಯಾಪಾರಿಗಳಿಂದ ಮುಂದಿನ ನಮ್ಮ ಪೀಳಿಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಮೇಶ ಕತ್ತಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಸ್ಥಳೀಯ ವ್ಯಾಪಾರ ಮಳಿಗೆಯ ಮಾಲೀಕರು ಅನ್ಯ ರಾಜ್ಯದವರಿಗೆ ವ್ಯಾಪಾರ ಪ್ರಾರಂಭಿಸಲು ಮಳಿಗೆಗಳನ್ನು ಬಾಡಿಗೆ ನೀಡುವುದು ಸರಿಯಲ್ಲ. ಪರ ರಾಜ್ಯದ ವ್ಯಾಪಾರಿಗಳಿಂದ ಮುಂದಿನ ನಮ್ಮ ಪೀಳಿಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಮೇಶ ಕತ್ತಿ ಎಚ್ಚರಿಸಿದರು.

ಬುಧವಾರ ಸಂಕೇಶ್ವರ ವ್ಯಾಪಾರಿ ಸಂಘದಿಂದ ನೀಡಿದ್ದ ಸ್ವಯಂ ಘೋಷಿತ ಬಂದ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಸ್ಥಳೀಯ ವ್ಯಾಪಾರಿ ಸಂಘದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಸ್ಥಳೀಯ ವ್ಯಾಪಾರಸ್ಥರು ಉಳಿಯಬೇಕಾದರೆ, ಪಟ್ಟಣದ ವ್ಯಾಪಾರಿಗಳು ಒಗ್ಗಟ್ಟಿನಿಂದ ಇರಬೇಕಿದ್ದು, ಹೊರರಾಜ್ಯದ ವ್ಯಾಪಾರಿಗಳೊಂದಿಗೆ ಅವರಂತೆಯೆ ಸ್ಥರ್ಧೆಗಿಳಿಯಬೇಕು. ಅವರ ಹಾಗೆ ಎಲ್ಲಾ ಸಾಮಗ್ರಿಗಳು ಗ್ರಾಹಕರಿಗೆ ಒಂದೇ ಸೂರಿನಡಿ ದೊರೆಯುವಂತೆ ವ್ಯಾಪಾರ ಮಾಡಬೇಕೆಂದು ಸಲಹೆ ನೀಡಿದರು.

ಸ್ಥಳೀಯ ವ್ಯಾಪಾರಿಗಳೊಂದಿಗೆ ಶಾಸಕ ನಿಖಿಲ್ ಕತ್ತಿ ಹಾಗೂ ಇಡಿ ಕತ್ತಿ ಕುಟುಂಬ ಸದಾ ಬೆಂಬಲವಾಗಿ ಇರಲಿದ್ದು, ಹೊರ ರಾಜ್ಯದ ವ್ಯಾಪಾರಿಗಳು ಸ್ಥಳೀಯರಿಗೆ ತೊಂದರೆ ನೀಡಬಾರದು ಎಂದರು.

ರಾಜಸ್ತಾನಿ ವ್ಯಾಪಾರಿಗಳು ಪಟ್ಟಣದಲ್ಲಿ ಎಲ್ಲ ತರಹದ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಕಳಪೆ ಗುಣಮಟ್ಟದ ಸಾಮಗ್ರಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ದರ ನೀಡಿ ಗ್ರಾಹಕರನ್ನ ಸೆಳೆಯುತ್ತಿದ್ದಾರೆ ಎಂದು ಸ್ಥಳೀಯ ವ್ಯಾಪಾರಸ್ಥರು ರಾಜಸ್ತಾನ ಮೂಲದ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ಟ್ರೇಡಿಂಗ್‌ ಪರವಾನಗಿ ನೀಡುವಾಗ ಪರಿಶೀಲನೆ ನಡೆಸಿ ನೀಡುವಂತೆ ವ್ಯಾಪಾರಿ ಸಂಘದಿಂದ ಪುರಸಭೆ ಮುಖ್ಯಾಧಿಕಾರಿಯವರಿಗೆ ಇದೆ ವೇಳೆ ಮನವಿ ಸಲ್ಲಿಸಲಾಯಿತು. ಮೊದಲು ಪಟ್ಟಣದ ಗಾಂಧಿ ಚೌಕ್‌ದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ವೀರ ರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಾ ಶುಗರ್ ಕಾರ್ಖಾನೆ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೊಳ್ಳಿ, ಪುರಸಭೆ ಸದಸ್ಯರಾದ ಅಮರ ನಲವಡೆ, ಸಂಜಯ ಶಿರಕೊಳ್ಳಿ, ಸುನೀಲ ಪರ್ವತರಾವ್, ದಿಲೀಪ ಹೊಸಮನಿ, ಪ್ರಮೋದ ಹೊಸಮನಿ, ಮುಖಂಡರಾದ ಶಂಕರಾವ್ ಹೆಗಡೆ, ಸುರೇಶ ಶೆಟ್ಟಿಮನಿ, ಸುಭಾಷ ಕೇಸರಕರ, ರಾಜು ಸುತಾರ, ರಾಜು ಸಂಸುದ್ದಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಉಪಸ್ಥಿತರಿದ್ದರು.

-----------

ಪೋಟೋ ಶೀರ್ಷಿಕೆ :10ಎಸ್ ಎನ್ ಕೆ01